ADVERTISEMENT

ಕಾರ್ಮಿಕ ಇಲಾಖೆಯಿಂದ ಮಣಿವಣ್ಣನ್ ಎತ್ತಂಗಡಿ‌

​ಪ್ರಜಾವಾಣಿ ವಾರ್ತೆ
Published 11 ಮೇ 2020, 20:15 IST
Last Updated 11 ಮೇ 2020, 20:15 IST
   

ಬೆಂಗಳೂರು: ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಿ.ಮಣಿವಣ್ಣನ್‌ ಅವರನ್ನು ಎತ್ತಂಗಡಿ ಮಾಡಿದ್ದು, ಆ ಹುದ್ದೆಯನ್ನು ಕೈಗಾರಿಕೆ ಮತ್ತು ವಾಣಿಜ್ಯಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್‌ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಶ್ರಮಿಕ ಸಮುದಾಯದ ಸಮಸ್ಯೆ ನಿಭಾಯಿಸುವಲ್ಲಿ ಆದ ಎಡವಟ್ಟುಗಳು, ಆಹಾರ ಕಿಟ್‌ ವಿತರಣೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಬಂದ ದೂರುಗಳೇ ಎತ್ತಂಗಡಿಗೆ ಕಾರಣ ಎಂದು ಮೂಲಗಳು ಹೇಳಿವೆ.

ಆಹಾರ ಕಿಟ್‌ಗಳ ವಿತರಣೆ ಮತ್ತು ಪಾಸ್‌ ವಿತರಣೆಗೆ ಸಂಬಂಧಿಸಿದಂತೆ ಮಣಿವಣ್ಣನ್‌ ವಿರುದ್ಧ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದವು. ಅಲ್ಲದೆ, ಶಾಸಕರು ಕೇಳಿದಷ್ಟು ಆಹಾರ ಧಾನ್ಯಗಳನ್ನು ಕೊಡಲಿಲ್ಲ ಮತ್ತು ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದೇ ಅವರ ವಿರುದ್ಧ ದೂರುಗಳು ಮುಖ್ಯಮಂತ್ರಿಗೆ ತಲುಪಲು ಕಾರಣ ಎಂದೂ ಹೇಳಲಾಗುತ್ತಿದೆ.

ADVERTISEMENT

ಕಾರ್ಮಿಕರ ದುಡಿಮೆ ಅವಧಿಯನ್ನು ಎಂಟು ಗಂಟೆಗಳ ಬದಲಿಗೆ 12 ಗಂಟೆಗಳಿಗೆ ಹೆಚ್ಚಿಸಲು ಕ್ರಮ ವಹಿಸುವುದಾಗಿ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಭರವಸೆ ಕೊಟ್ಟಿದ್ದಕ್ಕೆ, ಕಾರ್ಮಿಕ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಗಿತ್ತು.

ಎತ್ತಂಗಡಿ ಆಗಿರುವ ಮಣಿವಣ್ಣನ್‌ಗೆ ಯಾವುದೇ ಹುದ್ದೆಯನ್ನೂ ತೋರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.