ADVERTISEMENT

ಕೃಷ್ಣಾ, ತುಂಗಭದ್ರಾ: ಒಳಹರಿವು ಭಾರಿ ಹೆಚ್ಚಳ- ಕಾಳಜಿ ಕೇಂದ್ರಗಳಿಗೆ ಜನರ ಸ್ಥಳಾಂತರ

ಚಿಕ್ಕೋಡಿ ತಾಲ್ಲೂಕಿನ ಹಲವು ಹಳ್ಳಿಗಳು ಜಲಾವೃತ l ದ್ವೀಪಗಳಂತಾದ ಗೋಕಾಕ, ಘಟಪ್ರಭಾ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 19:31 IST
Last Updated 25 ಜುಲೈ 2021, 19:31 IST
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಜಲಾವೃತಗೊಂಡಿರುವ ದರೂರ ಗ್ರಾಮದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಜಲಾವೃತಗೊಂಡಿರುವ ದರೂರ ಗ್ರಾಮದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ   

ಬೆಳಗಾವಿ: ರಾಜ್ಯದಲ್ಲಿ ಭಾನುವಾರ ಮಳೆಯ ಬಿರುಸು ಕಡಿಮೆಯಾಗಿದೆ. ಆದರೆ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಿನ ಪ್ರಮಾಣದಲ್ಲೇ ಇದೆ. ಕೃಷ್ಣಾ, ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿದೆ.

ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳೂ ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಹಲವು ಹಳ್ಳಿಗಳು ಜಲಾವೃತಗೊಂಡಿವೆ.

ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಬಳಿ ವೇದಗಂಗಾ ನದಿಯಿಂದ ಮುಳುಗಡೆಯಾಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಮೂರು ದಿನಗಳಾದರೂ ನೀರಿನ ಪ್ರಮಾಣ ಕಡಿಮೆಯಾಗಿಲ್ಲ.

ADVERTISEMENT

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 3,02,348 ಮತ್ತು ದೂಧ್‌ಗಂಗಾ ನದಿಯಿಂದ 54,738 ಸೇರಿ ಒಟ್ಟು 3,57,086 ಕ್ಯುಸೆಕ್‌ ನೀರು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣೆಗೆ ಬಂದು ಸೇರುತ್ತಿದೆ. ಇದರಿಂದಾಗಿ ನದಿ ತೀರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಯಡೂರ, ಚಂದೂರ, ಯಡೂರವಾಡಿ, ಇಂಗಳಿ ಗ್ರಾಮಗಳನ್ನು ನೀರು ಆವರಿಸಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ.

ಅಥಣಿ ತಾಲ್ಲೂಕಿನಲ್ಲಿ ಜತ್ತ-ಜಾಂಜೋಟಿ ಹೆದ್ದಾರಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಜನರು ಅಪಾಯವನ್ನೂ ಲೆಕ್ಕಿಸದೆ ಅದರಲ್ಲೇ ಸಂಚರಿಸುತ್ತಿದ್ದಾರೆ. ಆ ತಾಲ್ಲೂಕಿನ ದರೂರ, ಸಪ್ತಸಾಗರ, ತೀರ್ಥ, ನದಿಇಂಗಳಗಾವ ಸೇರಿದಂತೆ 12 ತೋಟದ ವಸತಿಗಳು ಮತ್ತು ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದ್ದು,ಜನರು ಮತ್ತು ಜಾನುವಾರುಗಳನ್ನು ಸಮೀಪದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಸತ್ತಿ, ರಡ್ಡೇರಹಟ್ಟಿ, ಹುಲಗಬಾಳಿ, ಶೇಗುಣಸಿ ಸೇರಿದಂತೆ 22 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜನರನ್ನು ಅಲ್ಲಿಗೆ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಈ ಹಳ್ಳಿಗಳು 2019ರಲ್ಲೂ ನೆರೆ ಬಾಧಿತವಾಗಿದ್ದವು.

ದ್ವೀಪಗಳಂತಾಗಿರುವ ಪಟ್ಟಣಗಳು: ಹಿರಣ್ಯಕೇಶಿ ನದಿ ಪ್ರವಾಹದಿಂದ ಸಂಕೇಶ್ವರ ‍ಪಟ್ಟಣದ ವಿವಿಧ ಗಲ್ಲಿಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ಜಲಾವೃತ ಸ್ಥಿತಿಯಲ್ಲೇ ಇವೆ. ಘಟಪ್ರಭಾ ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ, ಘಟಪ್ರಭಾ ಪಟ್ಟಣಗಳು ದ್ವೀಪಗಳಂತಾಗಿವೆ.

ಮಹಾರಾಷ್ಟ್ರದ ಕಾಗಲ್‌ ಬಳಿಯ ರಸ್ತೆ ಮುಳುಗಿದೆ. ಪರಿಣಾಮ, ಕರ್ನಾಟಕ–ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಅಲ್ಲಿಂದ ಇಲ್ಲಿಗೆ ಮತ್ತು ಇಲ್ಲಿಂದ ಅಲ್ಲಿಗೆ ತೆರಳಬೇಕಿದ್ದ ಗೂಡ್ಸ್‌ ಮೊದಲಾದ ಲಾರಿಗಳು ಸೇವಾ ರಸ್ತೆಗಳಲ್ಲಿ ಸಾಲು ಸಾಲಾಗಿ ನಿಂತಿವೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿರುವುದರಿಂದ ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 20 ಗೇಟ್‌ಗಳನ್ನು ಎರಡು ಅಡಿ ಮೇಲೆ ತೆಗೆದು ಒಂದು ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ತುಂಗಭದ್ರಾ ನದಿ ಸ್ನಾನಘಟ್ಟ, ಚಕ್ರತೀರ್ಥ, ಪುರಂದರ ಮಂಟಪ ಭಾಗಶಃ ಮುಳುಗಿದೆ. ಹೂವಿನಹಡಗಲಿ ತಾಲ್ಲೂಕಿನ ನದಿ ತೀರ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇಲ್ಲಿನ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನ ಜಲಾವೃತವಾಗಿದೆ.

ನೀರಿನ ರಭಸಕ್ಕೆ ಮಗುಚಿದ ಲಾರಿ: ಗದಗ ಜಿಲ್ಲೆ ನರಗುಂದ- ರೋಣ ರಸ್ತೆ ಮಧ್ಯೆ ಇರುವ ಯಾವಗಲ್ ಸಮೀಪದಲ್ಲಿನ ಬೆಣ್ಣೆ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರವೂ ಮುಂದುವರಿದಿದೆ. ಆಂಧ್ರದ ಗೂಡ್ಸ್‌ ಲಾರಿಯೊಂದು ರೋಣ ಕಡೆಗೆ ತೆರಳಲು ತುಂಬಿ ಹರಿಯುವ ಸೇತುವೆ ದಾಟುವ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಮಗುಚಿಕೊಂಡಿತು. ಲಾರಿ ಕಿರು ಸೇತುವೆಯ ರಕ್ಷಣಾ ಕಲ್ಲುಗಳಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.