ADVERTISEMENT

ಮಾತೃ ವಂದನ: ಅನುದಾನ ನೀಡಿ

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಡಾ.ಹನುಮಂತಯ್ಯ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:11 IST
Last Updated 10 ಡಿಸೆಂಬರ್ 2019, 19:11 IST
   

ನವದೆಹಲಿ: ಗರ್ಭಿಣಿಯರ ಮತ್ತು ನವಜಾತ ಶಿಶುವಿನ ಅಪೌಷ್ಟಿಕತೆ ನಿವಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ಮಾತೃ ವಂದನ’ ಯೋಜನೆಗೆ ಅಗತ್ಯವಿರುವ ಅನುದಾನ ಒದಗಿಸುವಂತೆ ಕಾಂಗ್ರೆಸ್‌ ಸದಸ್ಯ ಡಾ.ಎಲ್. ಹನುಮಂತಯ್ಯ ಆಗ್ರಹಿಸಿದರು.

ರಾಜ್ಯಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ದೇಶದ ಬಹುಪಾಲು ಗರ್ಭಿಣಿಯರಿಗೆ ಹೆರಿಗೆ ಪ್ರಯೋಜನ ಕಾಯ್ದೆಯಡಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ–2013ರ ಅಡಿ ಗರ್ಭಿಣಿಯರು ಮತ್ತು ನವಜಾತ ಶಿಶುವಿಗೆ ಮಾಸಿಕ ₹ 6,000 ನೀಡುವುದಾಗಿ 2016ರ ಡಿಸೆಂಬರ್‌ನಲ್ಲಿ ಪ್ರಧಾನಿ ಅವರೇ ಘೋಷಿಸಿದ್ದಾರೆ. ಆದರೂ, ಕೇಂದ್ರ ಸರ್ಕಾರ ಯೋಜನೆಯನ್ನು
ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದರು.

ADVERTISEMENT

ಯೋಜನೆ ಕಾರ್ಯಗತಗೊಳಿಸಲು ವಾರ್ಷಿಕ ಕನಿಷ್ಠ ₹ 15,000 ಕೋಟಿ ಒದಗಿಸುವ ಅಗತ್ಯವಿದ್ದರೂ, ಕೇಂದ್ರ ಸರ್ಕಾರ 2017–18 ನೇ ಸಾಲಿನ ಬಜೆಟ್‌ನಲ್ಲಿ ಕೇವಲ ₹ 2,700 ಕೋಟಿ ಮೀಸಲಿರಿಸಿತ್ತು. ಅದರಲ್ಲಿ ₹ 2,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಛತ್ತೀಸ್‌ಗಡ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಕೇವಲ ಶೇ 31ರಷ್ಟು ಗರ್ಭಿಣಿಯರು ಹೆಚ್ಚುವರಿ ಪೌಷ್ಟಿಕ ಆಹಾರ ಸೇವಿಸಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದೆ ಎಂದು ಅವರು ವಿವರಿಸಿದರು.

ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿನ ಶೇ 75ರಷ್ಟು ಗರ್ಭಿಣಿಯರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ದೇಶದ ಮೂವರು ಮಕ್ಕಳಲ್ಲಿ ಇಬ್ಬರು ಅಪೌಷ್ಟಿಕತೆಯ ಕಾರಣದಿಂದ ಸಾವಿಗೀಡಾಗುತ್ತಿರುವುದು ವಿಷಾದನೀಯ. ಕೇಂದ್ರವು ಕೂಡಲೇ ಯೋಜನೆಯ ಸಮರ್ಪಕ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.