ADVERTISEMENT

ಕನ್ನಡದಲ್ಲಿ ವೈದ್ಯಕೀಯ ಕೋರ್ಸ್‌ ಆರಂಭಿಸಿ: ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 19:28 IST
Last Updated 25 ನವೆಂಬರ್ 2021, 19:28 IST
ಗೃಹ ಸಚಿವ ಆರಗ ಜ್ಞಾನೇಂದ್ರ ‘ಚಾರುಲತಾ- ವಸಂತ’ ಕಾವ್ಯ ಕಥನದ ಇಂಗ್ಲಿಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿದರು. ಲೇಖಕ ಗುರುರಾಜ ಕರಜಗಿ, ಮಲ್ಲೇಪುರಂ ಜಿ.ವೆಂಕಟೇಶ್, ಹಂಪ ನಾಗರಾಜಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್, ರಾಜೇಂದ್ರ ಚೆನ್ನಿ ಇದ್ದರು
ಗೃಹ ಸಚಿವ ಆರಗ ಜ್ಞಾನೇಂದ್ರ ‘ಚಾರುಲತಾ- ವಸಂತ’ ಕಾವ್ಯ ಕಥನದ ಇಂಗ್ಲಿಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿದರು. ಲೇಖಕ ಗುರುರಾಜ ಕರಜಗಿ, ಮಲ್ಲೇಪುರಂ ಜಿ.ವೆಂಕಟೇಶ್, ಹಂಪ ನಾಗರಾಜಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್, ರಾಜೇಂದ್ರ ಚೆನ್ನಿ ಇದ್ದರು   

ಬೆಂಗಳೂರು: ರಾಜ್ಯ ಸರ್ಕಾರ ಕನ್ನಡದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಅನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಿದ್ದು, ವೈದ್ಯಕೀಯ ಕೋರ್ಸ್‌ ಕೂಡ ಕನ್ನಡದಲ್ಲಿ ಆರಂಭಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ನೀಡಿದರು.

ಸಾಹಿತಿ ಹಂಪ ನಾಗರಾಜಯ್ಯ ಅವರ ‘ಚಾರುಲತಾ- ವಸಂತ’ ಎಂಬ ಕಾವ್ಯ ಕಥನದ ಇಂಗ್ಲಿಷ್‌ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ’ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ಕನ್ನಡದಲ್ಲಿ ಬೋಧಿಸಲು ಅನುಕೂಲವಾಗುವಂತೆ ಪಠ್ಯಕ್ರಮಗಳನ್ನು ರಚಿಸಬೇಕು’ ಎಂದೂ ಸಲಹೆ ನೀಡಿದರು.

’ಕನ್ನಡ ಅತ್ಯಂತ ಪ್ರಾಚೀನವೂ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದು. ಪ್ರಪಂಚ ಯಾವುದೇ ಭಾಷೆಗಳಿಗೂ ಪ್ರಬುದ್ಧತೆಯಲ್ಲಿ ಸರಿಸಾಟಿಯಾಗಬಲ್ಲ ಭಾಷೆ ಕನ್ನಡ. ಆದ್ದರಿಂದ, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿಷಯಗಳ ಪಠ್ಯಕ್ರಮಗಳು ನಾಡಿನ ಭಾಷೆಯಲ್ಲೇ ರಚನೆ ಆಗಬೇಕು. ಇದಕ್ಕೆ ಸಾಹಿತಿಗಳು ಮತ್ತು ಚಿಂತಕರು ಸಲಹೆ ಸೂಚನೆಗಳನ್ನು ನೀಡಬೇಕು‘ ಎಂದು ಮನವಿ ಮಾಡಿದರು.

ADVERTISEMENT

‘ಕನ್ನಡ ಭಾಷೆಯ ಅತ್ಯುತ್ತಮ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡಲು ಅಡ್ಡಿಯಾಗಿರುವ ಲೇಖಕರ ಹಕ್ಕುಸ್ವಾಮ್ಯ ಸಂಬಂಧ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದರು.

ಕೃತಿಯ ಬಗ್ಗೆ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್‌ ಮತ್ತು ವಿಮರ್ಶಕ ರಾಜೇಂದ್ರ ಚೆನ್ನಿ ಮಾತನಾಡಿದರು. ಹಂಪ ನಾಗರಾಜಯ್ಯ ಮತ್ತು ಕಮಲಾ ಹಂಪನಾ ದಂಪತಿಯನ್ನು ಸನ್ಮಾನಿಸಲಾಯಿತು. ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ, ಶಿಕ್ಷಣ ತಜ್ಞ ಗುರುರಾಜ ಕರಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.