ADVERTISEMENT

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಳಕ್ಕೆ ಚಿಂತನೆ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 5 ಮೇ 2020, 19:31 IST
Last Updated 5 ಮೇ 2020, 19:31 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಬಹು ವರ್ಷಗಳ ಬೇಡಿಕೆಯಾಗಿರುವ ಶಿಷ್ಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ಕೊರೊನಾ ಸೋಂಕಿತನ ಸಂಪರ್ಕದ ಹಿನ್ನೆಲೆಯಲ್ಲಿ ಸ್ವಯಂ ಗೃಹ ದಿಗ್ಬಂಧನದಲ್ಲಿರುವ ಸಚಿವರು ಮಂಗಳವಾರ ಇಲಾಖೆ ಪ್ರಮುಖರ ಜತೆ ನಡೆಸಿದ ವಿಡಿಯೊ ಸಮಾಲೋಚನೆ ಸಂದರ್ಭದಲ್ಲಿ ಈ ಸೂಚನೆ ನೀಡಿದರು ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ಪ‍್ರಜಾವಾಣಿ’ಯಲ್ಲಿ ಇದೇ 2 ರಂದು ಈ ಸಂಬಂಧ ಸುದ್ದಿ ಪ್ರಕಟವಾಗಿತ್ತು. ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಪಿಜಿ ವಿದ್ಯಾರ್ಥಿಗಳು ಸಹ ತಮ್ಮ ಬಹು ದಿನಗಳ ಬೇಡಿಕೆ ಈಡೇರಿಸುವಂತೆ ಕೋರಿದ್ದರು.

ADVERTISEMENT

ವಿಡಿಯೊ ಸಂವಾದದ ವೇಳೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಇದ್ದರು. ಶಿಷ್ಯವೇತನ ಹೆಚ್ಚಳ ಕುರಿತು ಕ್ರಮ ಕೈಗೊಳ್ಳಲು ಈ ಮೂವರಿಗೂ ಸಚಿವರು ಸೂಚನೆ ನೀಡಿದರು.

ಪಿಜಿ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆ, ರಾಜ್ಯದಲ್ಲಿ ಯಾವ ವರ್ಷ ಎಷ್ಟು ಹೆಚ್ಚಳ ಮಾಡಲಾಗಿತ್ತು ಎಂಬ ವಿವರಗಳನ್ನು ಸಚಿವರು ಪಡೆದರು. ಹೆಚ್ಚಳದ ಪ್ರಮಾಣ ಮತ್ತು ವಾರ್ಷಿಕ ಬೇಕಾದ ಅನುದಾನದ ಬಗ್ಗೆಯೂ ಮಾಹಿತಿ ಪಡೆದ ಸಚಿವರು, ಅಗತ್ಯ ಸೂಚನೆಗಳ ಸಹಿತ ಪರಿಷ್ಕರಣೆಗೆ ಕ್ರಮ ಜರುಗಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.