ಕನಕಪುರ: ಮೇಕೆದಾಟು ಅಣೆಕಟ್ಟೆ ನಿರ್ಮಾಣದ ವಿಚಾರದಲ್ಲಿ ಕರ್ನಾಟಕ–ತಮಿಳುನಾಡು ನಡುವೆ ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ತಾಲ್ಲೂಕಿನ ಮೇಕೆದಾಟು ಬಳಿ ಶುಕ್ರವಾರ ಉದ್ದೇಶಿತ ಅಣೆಕಟ್ಟೆ ನಿರ್ಮಾಣದ ಸ್ಥಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
‘ಯೋಜನೆ ಸಂಬಂಧ ಮಾತುಕತೆಗಾಗಿ ತಮಿಳುನಾಡು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದು ಮನವಿ ಮಾಡಿದ್ದೇವೆ. ಅವರು ಅನುಮತಿ ಕೊಟ್ಟರೆ ಚೆನ್ನೈಗೆ ಹೋಗಿ ಅವರಿಗೆ ವಿವರಿಸುತ್ತೇವೆ. ಅವರೇ ಇಲ್ಲಿಗೆ ನಿಯೋಗ ಕರೆದುಕೊಂಡು ಬಂದರೆ ಮಾಹಿತಿ ಹಂಚಿಕೊಳ್ಳಲು ಸಿದ್ಧರಿದ್ದೇವೆ’ ಎಂದರು.
‘ಕೇಂದ್ರ ಸರ್ಕಾರ ಹಾಗೂ ತಮಿಳುನಾಡಿಗೆ ಯೋಜನೆಯ ವಾಸ್ತವಾಂಶ ಹೆಚ್ಚಾಗಿ ಗೊತ್ತಿದೆ. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ವಿರೋಧಿಸಲಾಗುತ್ತಿದೆ. ತಮಿಳುನಾಡು ಸರ್ಕಾರವು ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಾಪಸ್ ಪಡೆಯುವ ವಿಶ್ವಾಸ ಇದೆ’ ಎಂದರು.
‘ಕಾವೇರಿ ಐ–ತೀರ್ಪಿನಂತೆ ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಒಟ್ಟು 18 ಟಿಎಂಸಿಯಷ್ಟು ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಇದೆ. ಈ ಜಲಾಶಯದಿಂದ ಮಹಾನಗರಿಯ ನೀರಿನ ಬವಣೆ ನೀಗಲಿದೆ. ಕೇಂದ್ರವು ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ನ್ಯಾಯಾಲಯದ ಹಸಿರು ಪೀಠಕ್ಕೂ ಮನವರಿಕೆ ಮಾಡಿಕೊಟ್ಟು, ಕಾಮಗಾರಿಗೆ ಯಾವುದೇ ಅಡಚಣೆ ಆಗದಂತೆ ನಿಗಾ ವಹಿಸಲಾಗುವುದು’ ಎಂದರು.
ಒಂಟಿಗುಂಡ್ಲು ಹಾಗೂ ಮೇಕೆದಾಟು ಪ್ರದೇಶವನ್ನು ಸಚಿವರು ವೀಕ್ಷಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.