ADVERTISEMENT

ಮೇಕೆದಾಟು: ಕಾಂಗ್ರೆಸ್‌ ಸಾಧನೆ ಶೂನ್ಯ: ರಾಜೀವ್‌

ಚುನಾವಣೆ ಮೇಲೆ ಕಣ್ಣಿಟ್ಟೇ ಪಾದಯಾತ್ರೆ: ಬಿಜೆಪಿ ಶಾಸಕ ಪಿ. ರಾಜೀವ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 19:13 IST
Last Updated 15 ಫೆಬ್ರುವರಿ 2022, 19:13 IST
ಪಿ. ರಾಜೀವ್‌
ಪಿ. ರಾಜೀವ್‌   

ಬೆಂಗಳೂರು: ‘ಮೇಕೆದಾಟು ಅಣೆಕಟ್ಟೆ ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ ಸಾಧನೆ ಶೂನ್ಯ. ಚುನಾವಣೆಯ ಮೇಲೆ ಕಣ್ಣಿಟ್ಟೇ ಪಾದಯಾತ್ರೆ ನಡೆಸಿದರು’ ಎಂದು ಬಿಜೆಪಿಯ ಪಿ.ರಾಜೀವ್‌ ಆರೋಪ ಮಾಡಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ವಾಗ್ದಾಳಿಯ ಮೂಲಕ ತಿರುಗೇಟು ನೀಡಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರಾಜೀವ್‌ ಅವರು, ‘ಇದೀಗ ಪಾದಯಾತ್ರೆ ಮಾಡಿರುವ ಕಾಂಗ್ರೆಸ್‌ಗೆ ಐದು ವರ್ಷಗಳ ಅಧಿಕಾರ ಇದ್ದಾಗ ಏನು ಮಾಡಿತ್ತು? ಅದರ ಫಲಶ್ರುತಿ ಏನು? ಆಗ ಮೇಕೆದಾಟು ಯೋಜನೆ ಆರಂಭಿಸುವ ಬಗ್ಗೆ ಇಚ್ಛಾಶಕ್ತಿ ಏಕೆ ಪ್ರದರ್ಶಿಸಲಿಲ್ಲ’ ಎಂದು ಪ್ರಶ್ನಿಸಿದರು.

ಇಂತಹದ್ದೊಂದು ಯೋಜನೆ ಆರಂಭಿಸುವಾಗ ನಾಲ್ಕು ಹಂತಗಳು ಇರುತ್ತವೆ. ಮೊದಲಿಗೆ ಡಿಪಿಆರ್‌, ಪರ್ಯಾಯ ಅರಣ್ಯ ಬೆಳೆಸಲು ಜಮೀನು ಗುರುತಿಸುವುದು, ಪರಿಸರ ಇಲಾಖೆ ಮತ್ತು ಕೇಂದ್ರ ಜಲಪ್ರಾಧಿಕಾರದಿಂದ ಅನಮೋದನೆ ಪಡೆಯಬೇಕು. ನಾಲ್ಕು ಹಂತಗಳಲ್ಲಿ ಡಿಪಿಆರ್‌ ಮಾಡಿ ಕಳಿಸಿತ್ತು. ಕೇಂದ್ರ ಸರ್ಕಾರ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದ ಮೇಲೆ ಪೂರ್ಣ ಪ್ರಮಾಣದಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಕೆ ಆಯಿತು. ಹಾಗಿದ್ದರೆ ಕಾಂಗ್ರೆಸ್‌ ಸಾಧನೆ ಶೂನ್ಯವಲ್ಲವೆ ಎಂದು ಕಾಲೆಳೆದರು.

ADVERTISEMENT

ರಾಜೀವ್‌ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಡಿಪಿಆರ್‌ ಆಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅದರ ಪರಿಷ್ಕರಣೆ ಆಯಿತು. ಈಗ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಬೇಕು ಎಂದರು. ಕುಣಿಗಲ್‌ ಕ್ಷೇತ್ರದ ಡಾ.ರಂಗನಾಥ್‌ ಇದಕ್ಕೆ ಧ್ವನಿಗೂಡಿಸಿ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇರುವಾಗ ಪರಿಸರ ಇಲಾಖೆಯ ಅನುಮತಿ ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

‘ಶ್ರೀಕಿ ಪರಾರಿಯಾಗಲು ಅವಕಾಶ’:
ಬಿಟ್ ಕಾಯಿನ್ ವಿಷಯ ಪ್ರಸ್ತಾಪಿಸಿದ ರಾಜೀವ್‌, 2017ರಲ್ಲಿದ್ದ ಸರ್ಕಾರ ಶ್ರೀಕಿ ಪರಾರಿಯಾಗಲು ಅವಕಾಶ ನೀಡಿತ್ತು ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ಬಿಟ್‌ ಕಾಯಿನ್‌ ವಿಚಾರಕ್ಕೇ ಹೊಡೆದಾಟ ಆಗಿತ್ತು ಎಂದು ನಾನೇ ಹೇಳಿದ್ದೆ. ಅಂದಿನ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದರು.

ಶ್ರೀಕಿಯನ್ನು ಅಡಗಿಸಲು ಕಾರಣವೇನು ಎಂಬುದು ಬಯಲಿಗೆ ಬರಬೇಕು. ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಮತ್ತು ಪೊಲೀಸರ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಸಿದರು ಎಂದು ರಾಜೀವ್ ಹೇಳಿದಾಗ, ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ನಮ್ಮ ಸರ್ಕಾರ ಬಂದ ಮೇಲೆ ಹೈಡ್ರೋಗಾಂಜಾ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಲಾಯಿತು’ ಎಂದು ರಾಜೀವ್‌ ಹೇಳಿದರು.

ಬೆನ್ನು ತಟ್ಟಿದ ಬಿಎಸ್‌ವೈ: ಖಾದರ್‌ ಮಾತಿನ ಪ್ರಹಾರ

ರಾಜೀವ್ ಅವರ ಮಾತಿನ ವೈಖರಿಗೆ ತಲೆದೂಗಿದ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಬಳಿ ಕರೆದು ಬೆನ್ನು ತಟ್ಟಿ ಶ್ಲಾಘಿಸಿದರು. ರಾಜೀವ್‌ ಅವರು ಯಡಿಯೂರಪ್ಪ ಕಾಲು ಮುಟ್ಟಿ ನಮಸ್ಕರಿಸಿದರು.

ಮತ್ತೊಂದೆಡೆ ವಿರೋಧ ಪಕ್ಷದ ಸಾಲಿನಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಅನುಪಸ್ಥಿತಿಯಲ್ಲಿ ನೂತನ ಉಪನಾಯಕ ಯು.ಟಿ.ಖಾದರ್‌ ಅವರು ಸರ್ಕಾರ ಮತ್ತು ಆಡಳಿತ ಪಕ್ಷದ ಸದಸ್ಯರನ್ನೂ ತಮ್ಮ ಮೊನಚು ಮಾತುಗಳಿಂದ ತಿವಿದು ತರಾಟೆ ತೆಗೆದುಕೊಂಡರು. ಇವರಿಗೆ ಕಾಂಗ್ರೆಸ್‌ನ ಯುವ ಶಾಸಕರು ಸಾಥ್‌ ನೀಡಿದ್ದು ವಿಶೇಷ. ವಂದನಾ ನಿರ್ಣಯದ ಮೇಲಿನ ಮೊದಲ ದಿನದ ಆರಂಭಿಕ ಚರ್ಚೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಯುವ ಶಾಸಕರ ವಾಕ್ಸಮರವೇ ಜೋರಾಗಿತ್ತು.

ದೀಪ, ಜಾಗಟೆ ಮೌಢ್ಯವಲ್ಲವೇ?

‘ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನರಿಂದ ದೀಪ ಹಚ್ಚಿಸಿದರು, ಜಾಗಟೆ ಹೊಡೆಸಿ, ಚಪ್ಪಾಳೆ ತಟ್ಟಿಸಿದರು. ಇದರಿಂದ ಕೊರೊನಾ ಹೋಯ್ತೇ’ ಎಂದು ಪ್ರಶ್ನಿಸಿದ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ, ‘ದೀಪ, ಜಾಗಟೆ ಹೊಡೆಸಿ ಮೂಢನಂಬಿಕೆ ಬಿತ್ತಿದ್ದು ಬಿಟ್ಟರೆ ಇನ್ನೇನೂ ಮಾಡಿಲ್ಲ’ ಎಂದು ವ್ಯಂಗ್ಯವಾಡಿದರು.

ಇದಕ್ಕೆ ತಿರುಗೇಟು ನೀಡಿದ ಕೊಳ್ಳೆಗಾಲ ಕ್ಷೇತ್ರದ ಸದಸ್ಯ ಎನ್‌.ಮಹೇಶ್‌, ‘ದೀಪ ಹಚ್ಚುವುದು, ಜಾಗಟೆ ಮತ್ತು ಚಪ್ಪಾಳೆ ತಟ್ಟುವುದರಿಂದ ಕೋವಿಡ್‌ ಹೋಗುವುದಿಲ್ಲ ಎಂಬುದು ಮೋದಿ ಅವರಿಗೂ ಗೊತ್ತು. ಆದರೆ, ಕೋರೊನಾ ವಿರುದ್ಧದ ಹೋರಾಟಕ್ಕೆ ಜನರನ್ನು ಒಗ್ಗೂಡಿಸುವುದೇ ಅವರ ಉದ್ದೇಶವಾಗಿತ್ತು. ಗುಣಕ್ಕೆ, ಒಳ್ಳೆಯ ಕೆಲಸಗಳಿಗೆ ಮತ್ಸರ ಪಡಬೇಕಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.