ADVERTISEMENT

ಮಾನಸಿಕ ಅಸ್ವಸ್ಥನಿಗೆ ಹೊಸ ರೂಪಕೊಟ್ಟ ಯುವಕರ ತಂಡ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 11:24 IST
Last Updated 5 ಜೂನ್ 2019, 11:24 IST
   

ಭಟ್ಕಳ (ಉತ್ತರ ಕನ್ನಡ): ಇಲ್ಲಿನ ರೈಲು ನಿಲ್ದಾಣದಲ್ಲಿ ಒಂದು ತಿಂಗಳಿನಿಂದ ಅರೆಬೆತ್ತಲಾಗಿ ತಿರುಗಾಡುತ್ತಿದ್ದ, ಮಾನಸಿಕ ಸ್ಥಿಮಿತವಿಲ್ಲದ ವ್ಯಕ್ತಿಗೆ ಸ್ಥಳೀಯ ಆಟೊ ರಿಕ್ಷಾ ಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ಮಂಜು ನಾಯ್ಕ ಮುಟ್ಟಳ್ಳಿ ಮತ್ತು ಸಮಾನ ಮನಸ್ಕರ ತಂಡ ಹೊಸ ರೂಪ ನೀಡಿದೆ.

ಪುಣೆ ಮೂಲದವರು ಎನ್ನಲಾಗುವ ಈ ವ್ಯಕ್ತಿ, ಒಂದು ತಿಂಗಳಿನಿಂದ ರೈಲು ನಿಲ್ದಾಣದ ಬಳಿ ತಿರುಗಾಡುತ್ತಿದ್ದರು. ಮೈಮೇಲೆ ಕೊಳಕಾದ, ಹರಿದ ಬಟ್ಟೆಗಳನ್ನು ಧರಿಸಿ ಅಲೆದಾಡುತ್ತಿದ್ದರು. ಕುರುಚಲು ಗಡ್ಡ, ಕೂದಲು ಬಿಟ್ಟು ವಿರೂಪಗೊಂಡಿದ್ದರು.

ಮಂಜು ಹಾಗೂ ತಂಡದವರು ಸೋಮವಾರ ಅಸ್ವಸ್ಥನ ಗಡ್ಡ, ಕೂದಲನ್ನು ಕತ್ತರಿಸಿ, ಸ್ನಾನ ಮಾಡಿಸಿ ಸ್ವಚ್ಛ ಬಟ್ಟೆಯನ್ನು ತೊಡಿಸಿತು. ಊಟ, ತಿಂಡಿ ನೀಡಿ ಮಾನವೀಯತೆ ಮೆರೆಯಿತು.

ADVERTISEMENT

ಹೊಸರೂಪ ಪಡೆದ ಬಳಿಕ ಎಲ್ಲರಿಗೂ ಧನ್ಯವಾದ ತಿಳಿಸಿದ ವ್ಯಕ್ತಿಯು, ರೈಲಿನಲ್ಲಿ ಪುಣೆಗೆ ತೆರಳುವುದಾಗಿ ಪ್ರಯಾಣ ಬೆಳೆಸಿದ್ದಾರೆ. ಮಂಜು ಹಾಗೂ ಅವರ ತಂಡದ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಆಟೊರಿಕ್ಷಾ ಚಾಲಕರಾದ ಗಣಪತಿ ನಾಯ್ಕ, ಹನುಮಂತ ನಾಯ್ಕ, ಶೇಷಗಿರಿ ನಾಯ್ಕ, ನಾಗೇಶ ನಾಯ್ಕ, ಮಾದೇವ ನಾಯ್ಕ, ಶೇಖರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.