ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಹಲವು ಗಣ್ಯರುಕಂಬನಿ ಮಿಡಿದಿದ್ದಾರೆ.
ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮ್ಯ ಶಿವಳ್ಳಿ ನಿಧನಕ್ಕೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲುಮಾತಿನ,ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ನಿಧನ ನನಗೆ ತೀವ್ರ ಆಘಾತವನ್ನು ತಂದಿದೆ. ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ಕಳೆದ ಮೂರು ದಿನಗಳಿಂದ ಉಪಸ್ಥಿತರಿದ್ದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಶಿವಳ್ಳಿ ಅವರು ಇನ್ನಿಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ.ಕುಂದಗೋಳ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಶಿವಳ್ಳಿ ಜನಾನುರಾಗಿಗಳಾಗಿದ್ದರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿಯವರ ನಿಧನ ನನಗೆ ಅತೀವ ಆಘಾತವನ್ನುಂಟು ಮಾಡಿದೆ. ಹುಷಾರಿದ್ದ ಕೊನೆ ಕ್ಷಣದವರೆಗೂ ಧಾರವಾಡ ಕಟ್ಟಡ ಕುಸಿತದ ತೆರವು ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ರಾಜ್ಯ ಹಾಗೂ ಪಕ್ಷ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಭಗವಂತ ಶಿವಳ್ಳಿಯವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಟ್ವೀಟ್ ಮಾಡಿದ್ದಾರೆ.
ಸಿ.ಎಸ್ .ಶಿವಳ್ಳಿ ಅವರುಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ರು. ಸಜ್ಜನ, ಸರಳ ವ್ಯಕ್ತಿ,ವೀರಾವೇಶದ ಮಾತನಾಡದೆ ನಿಷ್ಠೆಯಿಂದ ಮಾತನಾಡುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ಈಗ ಅವರ ಕೊರತೆ ಎದ್ದು ಕಾಣುತ್ತಿದೆ. ನಿನ್ನೆ ಕಟ್ಟಡ ದುರಂತಕ್ಕೆ ಭೇಟಿ ನೀಡಿ ಜೀವನದ ಕೊನೆ ಕ್ಷಣದವರೆಗೂ ಸಮಾಜಸೇವೆ ಮಾಡಿದ ವ್ಯಕ್ತಿ ಶಿವಳ್ಳಿ. ಇವರ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ.
ಬಿ.ಎಲ್. ಶಂಕರ್
***
ನಿನ್ನೆ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಆಗ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಅಂತ ಹೇಳಿದೆವು ಆದರೆ, ಅವರು ಮನೆಯಲ್ಲಿ ವಿಶ್ರಾಂತಿ ಪಡೆದು ಬರುವುದಾಗಿ ಹೇಳಿ ಹೋದವರು. ನಂತರ ಅವರು ಮನೆಗೆ ಹೋದಾಗ ಈ ಘಟನೆ ಸಂಭವಿಸಿದೆ.
ಅರುಣಕುಮಾರ್, ಕಿಮ್ಸ್ ಆಸ್ಪತ್ರೆಯ ಅಧೀಕ್ಷಕ
***
ಗುರುವಾರನಾಲ್ಕು ಗಂಟೆಯಿಂದ 8ಗಂಟೆಯವರೆಗೂ ಅಲ್ಲಿಯೇ ಇದ್ದೆವು.ನನ್ನ ಮಗುವಿಗೂ ಇಲ್ಲಿಯೇ ದಾಖಲು ಮಾಡಿದ್ದೆ. ಕಾರಿನ ತನಕ ಬಂದು ಕಳುಹಿಸಿ ಹೋದವರು. ಆತನಿಗೆ ಜಿಲ್ಲೆಯ ಬಗ್ಗೆ ಬಹಳ ಕಾಳಜಿ ಇದ್ದ ವ್ಯಕ್ತಿ. ಮೂರು ಗಂಟೆಯವರೆಗೂ ನಾನು ಏರ್ ಪೋರ್ಟ್ ನಲ್ಲಿಯೇ ಇದ್ದೆವು. ಸಿಎಂ ನಾನು ಶಿವಳ್ಳಿ ಮೂವರು ಕಾರಿನಲ್ಲಿ ಕುಳಿತು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆವು. ಜಯದೇವ ಆಸ್ಪತ್ರೆಯ ಮಂಜುನಾಥ ಜೊತೆ ನಾನು ಜೊತೆ ಕೂಡಿ ಚರ್ಚಿಸಿ ಆಸ್ಪತ್ರೆಯನ್ನ ಉನ್ನತ ಮಟ್ಟಕ್ಕೇರಿಸಲು ಪ್ರಯತ್ನಿಸಿದ್ದೆವು. ಬಹಳ ದುರ್ದೈವ. ನಮ್ಮ ಜಿಲ್ಲೆಗೆ ಬಹಳ ನಷ್ಟವಾಗಿದೆ. ನನಗೆ ಬಹಳ ಬೇಜಾರಾಗಿದೆ.
ಬಸವರಾಜ ಹೊರಟ್ಟಿ
***
ಬಹಳ ಆಘಾತವಾಯಿತು. ನಾನು ಹೋಗಿದ್ದೆ, ಅಲ್ಲಿ ಆಘಾತವಾಯಿತು. ಬಹಳ ಸರಳ ಅನ್ನೋದು ಕಾಮನ್ ಆದ್ರೆ, ನಿಜವಾದ ಸರಳ ಸಜ್ಜನ, ಮುಗ್ಧ ವ್ಯಕ್ತಿ. ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುತ್ತಿರಲಿಲ್ಲ. ಅಟಲ್ ಬಿಹಾರ ವಾಜಪೇಯಿ ಗೌರವ ಅರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಬಂದ ಏಕೈಕ ವ್ಯಕ್ತಿ ಶಿವಳ್ಳಿ. ನನ್ನ ಸಲಹೆ ಪಡೆಯುತ್ತಿದ್ದ ವ್ಯಕ್ತಿ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಇರಿಸಿ ಅಲ್ಲಿ ತನ್ನ ಹೆಸರು ಹೇಳಿದ ರೋಗಿಗಳನ್ನ ಆಸ್ಪತ್ರೆಗೆ ತೋರಿಸಿ ಅವರು ಖರ್ಚು ವೆಚ್ಚಗಳನ್ನ ಭರಿಸುತ್ತಿದ್ದವರು ಶಿವಳ್ಳಿ.
ಜಗದೀಶ್ ಶೆಟ್ಟರ್,
***
ನನ್ನ ಸ್ನೇಹಿತ, ಅವರು ನೋಡಲಿಕ್ಕೆ ಹಳ್ಳಿಯವರಂತೆ ಕಂಡರೂ ಬುದ್ಧಿವಂತರು, ಅಷ್ಟು ಚನ್ನಾಗಿದ್ದ ಮನುಷ್ಯ ಹೃದಯಾಘಾತವಾಗಿರುವುದು ದುಃಖಕರ ಸಂಗತಿ. ಜನಪ್ರಿಯ ವ್ಯಕ್ತಿ. ಕ್ಷೇತ್ರದ ಜನರ ಜೊತೆ ಬಂಧುಗಳಂತೆ ಇದ್ದರು. ಇವರ ಆತ್ಮಕ್ಕೆ ಶಾಂತಿ ನೀಡಲಿ
ಎಲ್ .ಹನುಮಂತಯ್ಯ
ರಾಜ್ಯಸಭಾ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.