ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಇದ್ದಕ್ಕಿದ್ದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿ, ವಾಗ್ದಾಳಿ ಆರಂಭಿಸಿದ್ದು ಅಚ್ಚರಿ ಮೂಡಿಸಿತು.
‘ಕೇಂದ್ರ ಸರ್ಕಾರದ ಯೋಜನೆಗಳು ಜನಪರವಾಗಿದ್ದರೂ ಸಿದ್ದರಾಮಯ್ಯ ಟೀಕಿಸುತ್ತಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಚ್ ಕಟ್ಟುವವರಿಗೆ ಬಡವರ ಬಗ್ಗೆ ಕಾಳಜಿ ಎಲ್ಲಿಂದ ಬರುತ್ತದೆ. ‘ಅಚ್ಛೇದಿನ್’ ಬಗ್ಗೆಯೂ ಟೀಕಿಸಿದ್ದರು. ಕಲ್ಲಡ್ಕ ಪ್ರಭಾಕರ ಶಾಸ್ತ್ರೀಯವರ ಶಾಲೆಯ ಬಿಸಿಯೂಟ ನಿಲ್ಲಿಸಿ, ಭೇದಭಾವ ಹುಟ್ಟುಹಾಕಿದ್ದರು. ಇಂದಿನಿಂದಲೇ ಆ ಶಾಲೆಯಲ್ಲಿ ಮತ್ತೆ ಬಿಸಿಯೂಟ ಆರಂಭವಾಗುತ್ತದೆ’ ಎಂದು ಘೋಷಿಸಿದರು.
ಆನಂತರ ನಡೆದ ಪತ್ರಿಕಾಗೋಷ್ಠಿಯಲ್ಲೂ ವಾಗ್ದಾಳಿ ಮುಂದುವರಿಸಿ, ‘ಸರ್ಕಾರ ಸತ್ತುಹೋಗಿದೆ ಎಂದು ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಸರ್ಕಾರದ 100 ದಿನಗಳ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.
‘ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಆದರೆ ಡಿಕೆಶಿ ಅವರ ಬಗ್ಗೆ ಅಗೌರವದಿಂದ ಮಾತನಾಡಿದ್ದು ಬಹಿರಂಗವಾಗಿದೆ. ಕಲ್ಯಾಣ ಕರ್ನಾಟಕದಿಂದ ಕಾಂಗ್ರೆಸ್ ಮುಕ್ತ ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.