ADVERTISEMENT

ಸಚಿವರ ಸಾಮೂಹಿಕ ಗೈರು: ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 9:59 IST
Last Updated 10 ಮಾರ್ಚ್ 2021, 9:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕಲಾಪದಲ್ಲಿ ಭಾಗವಹಿಸಬೇಕಿದ್ದ ಸಚಿವರು ಸಾಮೂಹಿಕವಾಗಿ ಗೈರಾಗಿದ್ದರಿಂದ ಬುಧವಾರ ಮಧ್ಯಾಹ್ನದ ಬಳಿಕ ವಿಧಾನ ಪರಿಷತ್ ಕಲಾಪ ನಡೆಯಲಿಲ್ಲ.

ಮಧ್ಯಾಹ್ನ 1.45ಕ್ಕೆ ಗಂಟೆಗೆ ಸದನದ ಕೋರಂ ಬೆಲ್ ಹಾಕಲಾಯಿತು. 15 ನಿಮಿಷಗಳ ಬಳಿಕ ಕಲಾಪ ಆರಂಭವಾಯಿತು. ಆದರೆ, ಸಭಾ ನಾಯಕ‌ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಲವು ಸದಸ್ಯರು ಮಾತ್ರ ಆಡಳಿತ ಪಕ್ಷದ ಸಾಲಿನಲ್ಲಿದ್ದರು. ಸಚಿವರಾದ ಎಂ.ಟಿ.ಬಿ. ನಾಗರಾಜ್, ಕೆ. ಗೋಪಾಲಯ್ಯ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಸಿ.ಪಿ. ಯೋಗೇಶ್ವರ ಹಾಜರಿರಬೇಕಿತ್ತು. ಒಬ್ಬರೂ ಸದನಕ್ಕೆ ಬಂದಿರಲಿಲ್ಲ.

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಜೆಟ್ ಕುರಿತು ಮಾತನಾಡಬೇಕಿತ್ತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಹರಿಪ್ರಸಾದ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಆದರೆ, ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರು ಮತ್ತು ಶಾಸಕರು ಗೈರಾಗಿರುವ ಬಗ್ಗೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ಎತ್ತಿದರು.

ADVERTISEMENT

'ಸಚಿವ ಆರ್. ಶಂಕರ್ ಮನೆಯಲ್ಲಿ ಭೋಜನ ಕೂಟ ಇರುವುದರಿಂದ ಸಚಿವರು, ಶಾಸಕರು ಅಲ್ಲಿಗೆ ತೆರಳಿದ್ದಾರೆ. ಶೀಘ್ರದಲ್ಲಿ ಸದನಕ್ಕೆ ಬರುತ್ತಾರೆ' ಎಂದು ಸಭಾ ನಾಯಕರು ಉತ್ತರಿಸಿದರು.

ಕೆಲಕಾಲ ವಾದ, ಪ್ರತಿವಾದ ನಡೆಯಿತು. 'ಸಚಿವರು ಸಾಮೂಹಿಕವಾಗಿ ಸದನಕ್ಕೆ ಗೈರಾಗಿರುವುದರಿಂದ ಕಲಾಪವನ್ನು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡುತ್ತಿರುವುದಾಗಿ' ಸಭಾಪತಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.