ಬೆಂಗಳೂರು: ‘ನಮಗೆ ನೂತನ ಗೃಹ ಸಚಿವರು (ಅಮಿತ್ ಶಾ) ಬಂದಿದ್ದಾರೆ. ಇನ್ನು ಮೇಲೆ ಈ ಖಾತೆಗೆ‘ಕ್ಲೀನ್ ಚಿಟ್ ನೀಡುವ ಖಾತೆ’ ಎಂದು ನಾಮಕರಣ ಮಾಡುವುದು ಸೂಕ್ತ’ ಎಂದು ಟ್ವೀಟ್ ಮಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವರು, ನೆಟ್ಟಿಗರು ಹರಿಹಾಯ್ದಿದ್ದಾರೆ.
ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ‘ಪ್ರಿಯಾಂಕ್ ಅವರೇ ಕೈ ತೋರಿಸಿ ಅವಲಕ್ಷಣ ಹೇಳಿಸಿಕ್ಕೊಳ್ಳಬೇಡಿ , ನಿಮ್ಮ ಪಕ್ಷದ ಚಿಹ್ನೆ “ಕೈ”. ಅದರ ಅವಲಕ್ಷಣ ದೇಶದ ಜನ ಹೇಳಿ 10 ದಿನವೂ ಆಗಿಲ್ಲ. ಆಗಲೇ ಶುರು ಮಾಡಿದ್ರಲ್ಲ ನಿಮ್ಮ ಹಿರಿಯಕ್ಕನ ಚಾಳಿ. ಮೊದಲು ನಿಮ್ಮ ಮನೆ ಸರಿ ಮಾಡ್ಕೊಳಿ’ ಎಂದಿದ್ದಾರೆ.
‘ಈ ತರ ಉಡಾಫೆ ಹೇಳಿಕೆ ನೀಡಿದ್ದಕ್ಕೇ ಜನ ಸರಿಯಾದ ಉತ್ತರ ಕೊಟ್ಟಿರೋದು’ ಎಂದು ಕಲ್ಲೇಶ್ ಆಚಾರ್ ಪ್ರತಿಕ್ರಿಯಿಸಿದ್ದರೆ, ಸುರೇಶ್ ಹೊಸಮನಿ ಎಂಬುವರು, ‘ಹೌದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಲೀನ್ ಚಿಟ್ ಹಾಗೂ ನಿವೃತ್ತಿ ವೇತನವನ್ನೂ ನೂತನ ಗೃಹ ಸಚಿವರು ಕೊಡಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
‘ನಾಚಿಕೆಗೇಡಿನ ಹೊಟ್ಟೆ ಉರಿಯ ಮನುಷ್ಯ ನೀನು. ಮೊದಲು ಈ ಸಣ್ಣ ಬುದ್ಧಿ ಬಿಡು, ಉದ್ದಾರ ಆಗ್ತೀಯ. ಅಪ್ಪನ ಹೆಸರೇಳಿಕೊಂಡು ರಾಜಕೀಯ ಮಾಡೋನು ನೀನು. ನಿನಗೆ ಅವರ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ’ ಎಂದು ಮಹೇಶ ಹೊನ್ನುಡಿಕೆ ಹಂಗಿಸಿದ್ದರೆ, ‘ಅವನಿಗೆ ಬರ್ನಾಲ್ ಕೊಡಿಸಿ’ ಎಂದು ಸುಪ್ರೀತ್ ಪುಟ್ಟ ಎಂಬುವರು ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.