ವಿಜಯಪುರ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ, ‘ಹಿಂದೂಗಳು ವರ್ಷಕ್ಕೊಮ್ಮೆ ಬರುವ ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಆದರೆ, ಗಣೇಶ ಹಬ್ಬ ಬಂದಾಗ ಪರಿಸರ ಸ್ನೇಹಿ ಗಣೇಶ ಹಬ್ಬ, ದೀಪಾವಳಿ ಬಂದರೆ ಪಟಾಕಿ ರಹಿತ ದೀಪಾವಳಿ ಆಚರಣೆ ಮಾಡಿ ಎಂದೆಲ್ಲ ಬೋಧನೆ ಮಾಡಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಹಾಗಾದರೆ, ಪರಿಸರ ಸ್ನೇಹಿ ಗಣೇಶ ಹಬ್ಬ, ಪಟಾಕಿ ರಹಿತ ದೀಪಾವಳಿ ಆಚರಿಸುವ ಜೊತೆಗೆ ಇನ್ನು ಮುಂದೆ ಬಕ್ರೀದ್ನಲ್ಲಿ ರಕ್ತ ಹರಿಸುವುದು ಬೇಡ, ಡಿಸೆಂಬರ್ 31ರ ರಾತ್ರಿ ಪಟಾಕಿ ಹೊಡೆಯುವುದು ಬೇಡ, ಗುಡ್ ಫ್ರೈಡೆಯನ್ನು ಧ್ವನಿ ವರ್ದಕದಲ್ಲಿ ಕೂಗುವುದು ಬೇಡ, ರಸ್ತೆ ಮೇಲೆ ನಮಾಜ್ ಮಾಡುವುದು ಬೇಡ, ಬೀದಿಲಿ ಪಟಾಕಿ ಹೊಡೆಯುವುದು ಬೇಡ’ ಎಂದು ಸಲಹೆ ನೀಡಿದ್ದಾರೆ.
‘ನಾವು ಮನೆಯಲ್ಲಿ ದೀಪ ಹಚ್ಚುತ್ತೇವೆ, ಅವರು ಸ್ಪೀಕರ್ ಹಚ್ಚದೆ ನಮಾಜು ಮಾಡಲಿ, ರಸ್ತೆ ಮೇಲೆ ಬೇಡ..’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.