ADVERTISEMENT

ಆನಂದ್‌ ಸಿಂಗ್‌ಗೆ ಪೂಜೆಗೆ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 15:30 IST
Last Updated 19 ಡಿಸೆಂಬರ್ 2018, 15:30 IST

ಹೊಸಪೇಟೆ: ಹನುಮ ಮಾಲಾ ಸಂಕೀರ್ತನಾ ಯಾತ್ರೆಗೂ ಮುನ್ನ ಬುಧವಾರ ಸಂಜೆ ಇಲ್ಲಿನ ವಡಕರಾಯ ದೇಗುಲದಲ್ಲಿ ನಡೆದ ಮೂಲದೇವರ ಪೂಜೆಗೆ ಶಾಸಕ ಆನಂದ್‌ ಸಿಂಗ್‌ಗೆ ಅವಕಾಶ ನಿರಾಕರಿಸಲಾಯಿತು.

ದೇವರಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲು ಆನಂದ್‌ ಸಿಂಗ್‌ ಮುಂದಾಗುತ್ತಿದ್ದಂತೆ ಹನುಮ ಮಾಲಾ ಸಂಘಟನಾ ಸಮಿತಿ ಜಿಲ್ಲಾ ಅಧ್ಯಕ್ಷ ಪರಶುರಾಮ ಗುದ್ಲಿ, ನಗರಸಭೆ ಸದಸ್ಯ ರಾಮಚಂದ್ರಗೌಡ ವಿರೋಧ ವ್ಯಕ್ತಪಡಿಸಿದರು.

‘ನಿಮಗೆ ಇಲ್ಲಿ ಬರಲು ಯಾರು ಹೇಳಿದ್ದು. ನಿಮಗೆ ಇಲ್ಲಿಗೆ ಬರಲು ಬಿಟ್ಟಿದ್ದೇ ಹೆಚ್ಚು. ನೀವು ಪೂಜೆ ಮಾಡುವುದು ಬೇಡ. ನೀವು ಹಿಂದೂಗಳ ಪರ ಇಲ್ಲ’ ಎಂದು ಇಬ್ಬರು ತಡೆದರು. ಇದರಿಂದ ಮುನಿಸಿಕೊಂಡ ಆನಂದ್‌ ಸಿಂಗ್‌ ಅಲ್ಲಿಂದ ನಿರ್ಗಮಿಸಲು ಮುಂದಾದರು. ಈ ವೇಳೆ ಅಲ್ಲಿದ್ದ ಕೆಲವರು ಅವರನ್ನು ತಡೆದು, ಸಮಾಧಾನಗೊಳಿಸಿದರು.

ADVERTISEMENT

ಬಳಿಕ ಗುದ್ಲಿ ಪರಶುರಾಮ ಪೂಜೆ ನೆರವೇರಿಸಿ, ಮಹಾಮಂಗಳಾರತಿ ಮಾಡಿ, ಕುಂಬಳಕಾಯಿ ಒಡೆದು ಸಂಕೀರ್ತನಾ ಯಾತ್ರೆಗೆ ಚಾಲನೆ ಕೊಟ್ಟರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಂಡರು.

ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳದಿಂದ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಸಾವಿರಾರು ಜನ ಹನುಮಮಾಲಾಧಾರಿಗಳು ಭಾಗವಹಿಸಿದ್ದರು. ಇಡೀ ನಗರ ಕೇಸರಿಮಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.