ಬಾಗಲಕೋಟೆ: ‘ಕಾಂಗ್ರೆಸ್–ಜೆಡಿಎಸ್ ಮೈತ್ರಿಯಡಿ ರಾಜ್ಯದಲ್ಲಿ ಆರು ಸ್ಥಾನ ಗೆದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಬಾಗಲಕೋಟೆಗೆ ಕರೆಸಿ ಸನ್ಮಾನ ಮಾಡಿ ಮೆರೆಸಲಿದ್ದೇವೆ’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಛೇಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಕ್ಷೇತ್ರಗಳಲ್ಲಿ 22 ಕಡೆ ಬಿಜೆಪಿ ಅಭ್ಯರ್ಥಿಗಳು ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುವ ಸಚಿವ ಎಚ್.ಡಿ.ರೇವಣ್ಣ, ಮೇ 24ರಂದು ರಾಜಕೀಯದಿಂದ ನಿವೃತ್ತಿಯಾಗಲು ಸಿದ್ಧತೆ ಮಾಡಿಕೊಳ್ಳಲಿ. ನಿವೃತ್ತಿಯ ಗೌರವಾರ್ಥವೂ ರೇಷ್ಮೆ ರುಮಾಲು ಸುತ್ತಿ, ಬಾಗಲಕೋಟೆಯಲ್ಲಿ ಮೆರವಣಿಗೆ ಮಾಡಿ ಬೀಳ್ಕೊಡುಗೆ ನೀಡಲಿದ್ದೇವೆ ಎಂದು ಚಾಟಿ ಬೀಸಿದರು.
‘ಜನರ ಆಶೋತ್ತರಗಳನ್ನು ಅರಿತು ಅವರ ಮಧ್ಯದಿಂದ ಬೆಳೆದುಬಂದಿದ್ದರೆ ರೇವಣ್ಣನಿಗೆ ಜನಾಭಿಪ್ರಾಯದ ನಾಡಿಮಿಡಿತ ಅರ್ಥವಾಗುತ್ತಿತ್ತು. ಅಪ್ಪನ ರಕ್ಷಾ ಕವಚದಲ್ಲಿ ಬೆಳೆದುಬಂದಿರುವ ಅವರು, ಯಾರೋ ಜ್ಯೋತಿಷಿ ಮಾತು ಕೇಳಿ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ ಎಂದು ಹೇಳುತ್ತಿದ್ದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದುಸೂರ್ಯ–ಚಂದ್ರರಷ್ಟೇ ಸತ್ಯ’ ಎಂದರು.
‘ನೆಹರೂ ಹಾಗೂ ಇಂದಿರಾಗಾಂಧಿ ಮನೆತನದವರು ಮಹಾನ್ ಸುಳ್ಳು ಹೇಳುವವರು ಹಾಗೂ ಮೋಸಗಾರರು ಆಗಿದ್ದಾರೆ. ರಾಹುಲ್ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿಗೆ ಹೋಗಲಿದೆ’ ಎಂದು ಭವಿಷ್ಯ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.