ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಮತ್ತು ಪರ ಸ್ವಪಕ್ಷದ ಕಾರ್ಯಕರ್ತರ ಘೋಷಣೆ, ನೂಕಾಟದಿಂದಾಗಿ ಅಲ್ಲಿನ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮೊಟಕುಗೊಂಡಿದೆ.
ಬಿ.ಎಸ್.ಯಡಿಯೂರಪ್ಪ ಅವರು ಶೃಂಗೇರಿಯಲ್ಲಿ ಯಾತ್ರೆ ಮುಗಿಸಿ ಮಧ್ಯಾಹ್ನ 1.45ರ ಹೊತ್ತಿಗೆ ಮೂಡಿಗೆರೆಗೆ ತಲುಪಿದರು. ಅಯ್ಯಪ್ಪ ಸ್ವಾಮಿ ದೇಗುಲದಿಂದ ರೋಡ್ ಷೋ ಆರಂಭವಾಗಬೇಕಿತ್ತು. ಯಾತ್ರೆ ನಿಮಿತ್ತ ಬಹಳಷ್ಟು ಕಾರ್ಯಕರ್ತರು, ಮುಖಂಡರ ಪಟ್ಟಣದಲ್ಲಿ ಜಮಾಯಿಸಿದ್ದರು.
‘ಎಂ.ಪಿ.ಕುಮಾರಸ್ವಾಮಿ ಬೇಡ, ಬಿಜೆಪಿ ಬೇಕು..’ ಎಂದು ಹಲವರು ಘೋಷಣೆ ಕೂಗಿ, ಫಲಕಗಳನ್ನು ಪ್ರದರ್ಶಿಸಿದರು. ಇನ್ನು ಹಲವರು ‘ಬೇಕೇ ಬೇಕು ಕುಮಾರಸ್ವಾಮಿ ಬೇಕು’ ಎಂದು ಘೋಷಣೆಗಳನ್ನು ಕೂಗಿದರು.
ತಳ್ಳಾಟ, ನೂಕಾಟ ನಡೆಯಿತು. ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಎಂ.ಕೆ.ಪ್ರಾಣೇಶ್ ಮೊದಲಾದವರು ಇದ್ದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಕಾರು ಇಳಿಯಲಿಲ್ಲ. ಅವರು ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ತೆರಳಿದರು.
ಕುಮಾರಸ್ವಾಮಿ ವಿರೋಧಿ ಬಣದವರು ಮೂಡಿಗೆರೆಯ ಪ್ರೀತಂ ಸಭಾಂಗಣದಲ್ಲಿ
ಬೆಳಿಗ್ಗೆ ಸಭೆ ನಡೆಸಿ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದರು. ಯಾತ್ರೆಯಲ್ಲಿ ಪಾಲ್ಗೊಳ್ಳುವ ನಾಯಕರಿಗೆ ನಿಲುವು ತಿಳಿಸಲು ನಿರ್ಧರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.