ADVERTISEMENT

ಮೇಲ್ಮನೆಗೆ ವೆಂಕಟೇಶ್‌, ರಾಥೋಡ್

ವಿಧಾನಸಭೆಗೆ ವಿನಿಶಾ ನಿರೊ ನಾಮನಿರ್ದೇಶನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:01 IST
Last Updated 30 ಅಕ್ಟೋಬರ್ 2018, 20:01 IST
   

ಬೆಂಗಳೂರು: ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್‌, ಯು.ಬಿ. ವೆಂಕಟೇಶ್ ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ವಿಜಯಪುರದ ಪ್ರಕಾಶ್ ಅವರು ಕಾಂಗ್ರೆಸ್‌ನ ವಿವಿಧ ಸಮಿತಿಗಳಲ್ಲಿ ಅನೇಕ ವರ್ಷದಿಂದ ಕೆಲಸ ಮಾಡಿದವರು. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಎರಡು ಬಾರಿ ಲೋಕಸಭೆ, ಒಂದು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಲಂಬಾಣಿ ಸಮುದಾಯದವರಾದ ಇವರನ್ನು ಕ್ರೀಡಾ ಕೋಟಾದಡಿ ನಾಮ ನಿರ್ದೇಶನ ಮಾಡಲಾಗಿದೆ. ಇವರ ಪರವಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಭಾವ ಬೀರಿದ್ದರು.

ಕೋಲಾರದವರಾದ ಉದ್ಯಮಿ ವೆಂಕಟೇಶ್‌, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅತ್ಯಾಪ್ತ. ಜಯನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ನಿರಂತರ ಪ್ರಯತ್ನ ನಡೆಸಿದ್ದರು. ಜಯನಗರದಿಂದ ಟಿಕೆಟ್ ಕೊಡಿಸಲು ಖರ್ಗೆಯವರು ಪ್ರಭಾವ ಬೀರಿದ್ದರು. ಅಲ್ಲಿ ರಾಮಲಿಂಗಾರೆಡ್ಡಿ ಪುತ್ರಿಸೌಮ್ಯಾರೆಡ್ಡಿಗೆ ಪಕ್ಷದ ಟಿಕೆಟ್ ನೀಡಿತ್ತು. ಈ ಹೊತ್ತಿನಲ್ಲಿ ಪರಿಷತ್ತಿನ ಸದಸ್ಯ ಸ್ಥಾನ ನೀಡುವ ಭರವಸೆಯನ್ನು ವೆಂಕಟೇಶ್ ಅವರಿಗೆ ನೀಡಲಾಗಿತ್ತು.

ADVERTISEMENT

ಮರು ನೇಮಕ: ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಆಂಗ್ಲೋ ಇಂಡಿಯನ್ ಸದಸ್ಯತ್ವ ಕೋಟಾದಡಿ ವಿಧಾನಸಭಾ ಸದಸ್ಯರಾಗಿದ್ದ ವಿನಿಶಾ ನಿರೊ ಅವರನ್ನು ಮೈತ್ರಿ ಸರ್ಕಾರ ಮತ್ತೊಂದು ಅವಧಿಗೆ ನಾಮನಿರ್ದೇಶನ ಮಾಡಿದೆ.

ಈ ಮೂರು ನಾಮನಿರ್ದೇಶನ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.