ಚಿತ್ರದುರ್ಗ: ಉಪ ಮುಖ್ಯಮಂತ್ರಿ ಪರಮೇಶ್ವರ ಅವರನ್ನು ಸಾಣೇಹಳ್ಳಿಯ ತರಳುಬಾಳು ಶಾಖಾಮಠಕ್ಕೆ ಆಹ್ವಾನಿಸಿ ಅವಮಾನಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂತ್ರಿ ಸತ್ತರೆ ಏನೂ ಆಗದು ಎಂಬ ಮಾತನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಡಬಾರದಿತ್ತು. ಸ್ವಾಮೀಜಿ ಬಾಯಿಂದ ಇಂತಹ ಮಾತುಗಳನ್ನು ಸಮಾಜ ನಿರೀಕ್ಷೆ ಮಾಡುವುದಿಲ್ಲ. ಶ್ರೀಗಳು ಸಮಾಜಕ್ಕೆ ಮಾದರಿಯಾಗಬೇಕೇ ಹೊರತು ಮತ್ತೊಬ್ಬರ ಸಾವು ಬಯಸಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೇವಿಸುವ ಆಹಾರದ ಪರೀಕ್ಷೆ ನಡೆಸಿದ್ದು ತಪ್ಪು ಎಂದು ಹೇಳಿದರೆ ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ಇದು ಶಿಷ್ಟಾಚಾರದ ವಿಚಾರ. ಯಾರೇ ಈ ಸ್ಥಾನ ಅಲಂಕರಿಸಿದರೂ ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ’ ಎಂದರು.
‘ವೈಯಕ್ತಿಕ ಬದುಕಿನ ಒತ್ತಡಗಳಿಂದ ರಾಜಕಾರಣಕ್ಕೆ ಸಮಯ ನೀಡಲು ಆಗುತ್ತಿಲ್ಲ. ಹೀಗಾಗಿ, ಮುಂದಿನ 10 ವರ್ಷ ಚುನಾವಣಾ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ವಿಧಾನಸಭೆಗೆ ಅವಕಾಶ ಸಿಕ್ಕರೆ ಮಾತ್ರ ಸ್ಪರ್ಧಿಸುವ ಕುರಿತು ಯೋಚಿಸುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.