ADVERTISEMENT

ಕಮಲ ಕೆರೆಯಲ್ಲಿರಲಿ, ತೆನೆ ಹೊಲದಲ್ಲಿರಲಿ: ಡಿ.ಕೆ.ಶಿವಕುಮಾರ್

ಪ್ರಜಾಧ್ವನಿ ಯಾತ್ರೆಯಲ್ಲಿ ವಾಟ್ಸ್‌ಆ್ಯಪ್‌ ಕವನ ವಾಚಿಸಿದ ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 11:43 IST
Last Updated 11 ಫೆಬ್ರುವರಿ 2023, 11:43 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಮಂಡ್ಯ: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ, ಧರ್ಮ ಮಾಡಿರುವ ಕೈ ಅಧಿಕಾರಕ್ಕೆ ಬಂದರೆ ಚೆಂದ...ಮದ್ದೂರು ಪಟ್ಟಣದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಚಿಸಿದ ಕವಿತೆ ಇದು.

ವಾಟ್ಸ್‌ಆ್ಯಪ್‌ನಲ್ಲಿ ಬಂದಿದ್ದ ಕವಿತೆಯನ್ನು ವಾಚಿಸಿದ ಅವರು ‘ಎಚ್‌.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೀರಿ, ನಾನೂ ನಿಮ್ಮ ಮನೆಯ ಮಗ. ನನಗೂ ಒಮ್ಮೆ ಅಧಿಕಾರ ಕೊಡಿ, ನನ್ನ ಅಧಿಕಾರವನ್ನೂ ಒಂದು ಬಾರಿ ನೋಡಿ’ ಎನ್ನುತ್ತಾ ಪರೋಕ್ಷವಾಗಿ ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದರು.

‘ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಸುತ್ತೇವೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ನನ್ನ ನಾಯಕತ್ವಕ್ಕೆ ಜನರು ಆಶೀರ್ವಾದ ಮಾಡಬೇಕು. ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ, ಬಿಜೆಪಿಯಿಂದ ರಾಜ್ಯ, ರಾಷ್ಟ್ರವನ್ನು ಕಾಪಾಡಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು’ ಎಂದರು.

ADVERTISEMENT

‘ನಮ್ಮ ಮನೆಯಲ್ಲಿ ನನ್ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಂಸದರನ್ನು ವಿಧಾನಸಭೆಗೆ ನಿಲ್ಲಿಸುವ ತೀರ್ಮಾನ ಮಾಡಿಲ್ಲ. ಬೇರೆ ಪಕ್ಷಗಳಲ್ಲಿ ಏನೇ ತೀರ್ಮಾನ ಕೈಗೊಂಡರೂ ಅದು ನಮಗೆ ಸಂಬಂಧವಿಲ್ಲ’ ಎಂದರು.

‘ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನು ಕರೆದು ತಂದು ಪ್ರಚಾರ ಮಾಡಿಸಲಿ, ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ. ರಾಜಕೀಯ ಮಾಡಬೇಕು ಅಷ್ಟೇ, ಬೇರೆ ಯಾರನ್ನೂ ಕಟ್ಟಿ ಹಾಕಲು ಸಾಧ್ಯವಿಲ್ಲ’ ಎಂದರು.

‘37 ಶಾಸಕರಿದ್ದ ಜೆಡಿಎಸ್‌ಗೆ ನಾವು ಬೇಷರತ್‌ ಬೆಂಬಲ ನೀಡಿದ್ದೆವು. ಲೋಕಸಭಾ ಚುನಾವಣೆ ಬಂದಾಗ ನಿಖಿಲ್‌ಗೆ ಬೆಂಬಲ ನೀಡಿದ್ದೆವು. ಕೆಲವರಿಂದ ಅಸಮಾಧಾನ ಇದ್ದರೂ ನಾವು ಜೆಡಿಎಸ್‌ಗೆ ಬೆಂಬಲ ನೀಡಿದ್ದೆವು. ಸುಮಲತಾ ಅವರು ಕಾಂಗ್ರೆಸ್‌ ಟಿಕೆಟ್‌ ಕೇಳಿದಾಗ, ಕಾಂಗ್ರೆಸ್‌ನಿಂದ ಅಭ್ಯರ್ಥಿ ಹಾಕುವುದಿಲ್ಲ ಎಂದಿದ್ದೆವು. ಮಂಡ್ಯ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.