ADVERTISEMENT

ಮೊಗ್ರಾಲ್‌ ಪುತ್ತೂರಿನಲ್ಲಿ ಎನ್‌ಐಎ ಶೋಧ

ಭಯೋತ್ಪಾದನೆ ಚಟುವಟಿಕೆ–ಪಾಕ್‌ ಹಣ ಪೂರೈಕೆ ಶಂಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 19:31 IST
Last Updated 24 ಜನವರಿ 2019, 19:31 IST
   

ಕಾಸರಗೋಡು: ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಕೆಲವು ಸಂಘಟನೆಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳಿಂದ ಹಣ ಪಡೆಯುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬುಧವಾರ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನ ಮನೆಯೊಂದರ ಮೇಲೆ ದಾಳಿ ಮಾಡಿದೆ.

ಕಾಸರಗೋಡು ಪೊಲೀಸರ ಸಹಾಯದೊಂದಿಗೆ ಕೊಚ್ಚಿ ಎನ್ಐಎ ಡಿವೈಎಸ್ಪಿ ಅಬ್ದುಲ್ ಖಾದರ್ ನೇತೃತ್ವದಲ್ಲಿ ದೆಹಲಿ ಮತ್ತು ಕೊಚ್ಚಿಯಿಂದ ಬಂದ ಎನ್‌ಐಎ ತಂಡಗಳು ದಾಳಿ ನಡೆಸಿವೆ.

ಬಿಎಚ್‌ಇಎಲ್‌ನ ಕಾಸರಗೋಡು ಘಟಕದ ನೌಕರ, ಮೊಗ್ರಾಲ್ ಪುತ್ತೂರಿನ ಅಬ್ದುಲ್ ರಹಿಮಾನ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಯಾವ ದಾಖಲೆಗಳು ಪತ್ತೆಯಾಗಿವೆ ಎಂಬುದನ್ನು ಎನ್‌ಐಎ ಬಹಿರಂಗಪಡಿಸಿಲ್ಲ.

ADVERTISEMENT

ದುಬೈಯಿಂದ ರಾಜಸ್ಥಾನಕ್ಕೆ ಬಂದಿದ್ದ ಮೊಹಮ್ಮದ್ ಹುಸೈನ್ ಮೌಲಾನಿ ಆಲಿಯಾಸ್ ಬಬ್ಲು ಎಂಬಾತನನ್ನು ಸೋಮವಾರ ಎನ್‌ಐಎ ಬಂಧಿಸಿತ್ತು. ಆತನನ್ನು ವಿಚಾರಿಸಿದಾಗ ದೊರೆತ ಮಾಹಿತಿಯಂತೆ ಕಾಸರಗೋಡು ಸೇರಿ ದೇಶದ ಎಂಟು ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.

ಬಬ್ಲು ಎಂಬಾತ ಪಾಕ್ ಉಗ್ರರಿಂದ ಹಣ ಪಡೆದಿದ್ದು ಐಎಸ್‌ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈತನಿಗೆ ಮೊಗ್ರಾಲ್ ಪುತ್ತೂರಿನ ವ್ಯಕ್ತಿಯಿಂದ ಹಣದ ನೆರವು ಲಭಿಸಿದೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆದಿತ್ತು ಎನ್ನಲಾಗಿದೆ.

ಕಾಸರಗೋಡಿನಲ್ಲಿ 3 ತನಿಖಾ ತಂಡ

ಕೇಂದ್ರ ಗುಪ್ತಚರ ದಳ ಸಹಿತ ಮೂರು ತನಿಖಾ ತಂಡಗಳು ಕಾಸರಗೋಡಿನಲ್ಲಿ ಬೀಡು ಬಿಟ್ಟಿವೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ), ಸೈನ್ಯದ ಗುಪ್ತಚರ ದಳವಾದ ‘ರಾ’, ಕೇಂದ್ರ ವಿಚಕ್ಷಣಾ ದಳದ ವಿಶೇಷ ತಂಡಗಳು (ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ) ಕಾಸರಗೋಡಿನಲ್ಲಿ ಠಿಕಾಣಿ ಹೂಡಿವೆ. ಮೂರೂ ತಂಡಗಳು ಕೆಲವು ವಾರಗಳಿಂದ ಕಾಸರಗೋಡಿನ ಕೆಲವು ಮಂದಿಯ ಮೇಲೆ ನಿಗಾ ಇಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಬಿಎಚ್‌ಇಎಲ್‌ ಘಟಕದ ನೌಕರನ ಮನೆಯ ಮೇಲೆ ದಾಳಿ

ಕಾಸರಗೋಡು ಸಹಿತ 8 ಕಡೆ ಏಕಕಾಲದಲ್ಲಿ ದಾಳಿ

ಎಫ್‌ಐಎಚ್ ಸಂಘಟನೆಯಿಂದ ಹವಾಲಾ ಹಣ ಪೂರೈಕೆ ಶಂಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.