ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಭರ್ತಿಯಾಗಿದ್ದರಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚಿಮ್ಮನಚೋಡ ಗ್ರಾಮದ ಭೋವಿ ಬಡಾವಣೆಯಲ್ಲಿ 25, ಕನಕಪುರದಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ.
ಜಲಾಶಯದಿಂದ ಒಟ್ಟು 5 ಗೇಟುಗಳು ಎತ್ತಿ ಸುಮಾರು 20 ಸಾವಿರ ಕ್ಯುಸೆಕ್ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಎರಡು ಗೇಟುಗಳು ಐದು ಅಡಿ ಎತ್ತರ ಎತ್ತಿದ್ದರೆ, ಮೂರು ಗೇಟುಗಳು ಮೂರು ಅಡಿ ಎತ್ತರ ಎತ್ತಲಾಗಿದೆ.
ಒಳ ಹರಿವು ಹೆಚ್ಚಾಗಿರುವುದರಿಂದ ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗಿದೆ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಚಿಮ್ಮನಚೋಡ ಭೊವಿ ಬಡಾವಣೆಯಲ್ಲಿ ಜನರ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ ಜತೆಗೆ ದವಸ ಧಾನ್ಯ ಬಟ್ಟೆ ಬರೆಗಳು ಪ್ರವಾಹದ ನೀರಿಗೆ ಆಹುತಿಯಾಗಿವೆ. ಸಂಗಮೇಶ್ವರ ದೇವಾಲಯ ಮುಳುಗಿದ್ದು ಕೇವಲ ಗೋಪುರ ಹಾಗೂ ಛತ್ತು ಕೋಚರಿಸುತ್ತಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೆರವಿನಿಂದ ನಿರ್ಮಿಸಿದ ಪ್ರವಾಹ ನಿಯಂತ್ರಣ ಗೋಡೆಯೂ ಮುಳುಗಿದ್ದು ಭಾಗಶ: ಗೋಚರಿಸುತ್ತಿದೆ ಎಂದು ಬಿಜೆಪಿ ಮುಖಂಡ ರಾಮರೆಡ್ಡಿ ಪಾಟೀಲ ತಿಳಿಸಿದರು.
ಚಿಮ್ಮನಚೋಡ, ತಾಜಲಾಪುರ. ಗಾರಂಪಳ್ಳಿ ಹಾಗೂ ಚಂದಾಪುರ ಬ್ಯಾರೇಜು ಮುಳುಗಿದೆ.
‘ನನ್ನ ಮನೆ ಸಹಿತ ಕನಕಪುರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ. ಇದರಿಂದ ಕಾಳುಕಡಿಹಾಳಾಗಿವೆ’ ಎಂದು ದಲಿತ ಸೇನೆಯ ತಾಲ್ಲೂಕು ಉಪಾಧ್ಯಕ್ಷ ಶ್ರಿಧರ ವಗ್ಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.