ಮೈಸೂರು: ಒಂದೇ ಕುಟುಂಬದ ಮೂವರು ಸದಸ್ಯರು ಬಂಟ್ವಾಳ ಸಮೀಪದ ನೇತ್ರಾವತಿ ನದಿಗೆ ಹಾರಿದ್ದಾರೆ.
ಇವರಲ್ಲಿ ತಾಯಿ ಕವಿತಾ (57) ಅವರ ಮೃತದೇಹ ದೊರಕಿದೆ. ಪುತ್ರ ಕೌಶಿಕ (29) ಹಾಗೂ ಪುತ್ರಿ ಕಲ್ಪನಾ (27) ಇವರ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಇಲ್ಲಿನ ವಿಜಯನಗರದ ನಿವಾಸಿ ಕಿಸನ್ ಮಂದಣ್ಣ (65) ಶನಿವಾರವಷ್ಟೇ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟರು. ಇವರ ಮೃತದೇಹವನ್ನು ಮನೆಯಲ್ಲೆ ಬಿಟ್ಟು ಬೀಗ ಹಾಕಿಕೊಂಡು ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಸಂಬಂಧಿಕರಿಗೆ ತಿಳಿಸಿ, ನೇತ್ರಾವತಿ ನದಿಗೆ ಹಾರಿದ್ದಾರೆ. ತಾವು ಸಾಕಿದ್ದ ನಾಯಿಯ ಜತೆ ನೀರಿಗೆ ಧುಮುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ವಿಜಯನಗರ 4ನೇ ಹಂತದಲ್ಲಿ ವಾಸವಿದ್ದ ಕವಿತಾ ಅವರ ಪತಿ ಕಿಸನ್ ಮಂದಣ್ಣ (65) ಅವರು ಕೆಲ ದಿನಗಳ ಹಿಂದೆಯಷ್ಟೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಸಾವಿನಿಂದ ಖಿನ್ನತೆಗೆ ಜಾರಿದ ಕುಟುಂಬದ ಸದಸ್ಯರು ತಮ್ಮ ಸಂಬಂಧಕರಿಗೆ ಪತ್ರ ಬರೆದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮಡಿಕೇರಿ ಮೂಲದವರಾದ ಇವರು ಇಲ್ಲಿ ವಾಸವಿದ್ದರು. ಕಿಸನ್ ಮಂದಣ್ಣ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತಿ ಹೊಂದಿದ್ದರು. ಪುತ್ರ ಕೌಶಿಕ್ ಸಹ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಈಚೆಗಷ್ಟೆ ಕೆಲಸ ಬಿಟ್ಟಿದ್ದರು. ಸಂಬಂಧಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇವರು ಇದ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.