ಮೇಲುಕೋಟೆ (ಮಂಡ್ಯ ಜಿಲ್ಲೆ): ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಮೇಲುಕೋಟೆಗೆ ಭೇಟಿ ನೀಡಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.
ತಿರುಪತಿಯಲ್ಲಿ ಶ್ರೀನಿವಾಸನ ದರ್ಶನ ಪಡೆದು ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಂತರ ರಸ್ತೆಯ ಮೂಲಕ ಮೇಲುಕೋಟೆಯತ್ತ ಪ್ರಯಾಣಿಸಿದರು. ಪತ್ನಿಸಮೇತರಾಗಿ ಬಂದ ಅವರನ್ನು ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಸ್ವಾಗತಿಸಿದರು. ದೇವಾಲಯದಲ್ಲಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಮೊದಲಿಗೆ ಚೆಲುವನಾರಾಯಣಸ್ವಾಮಿ, ರಾಮಾನುಜಾಚಾರ್ಯರ ದರ್ಶನ ಪಡೆದರು. ನಂತರ ಯೋಗಾನರಸಿಂಹಸ್ವಾಮಿ ಬೆಟ್ಟ ಹತ್ತಿ ದೇವರಿಗೆ ಪೂಜೆ ಸಲ್ಲಿಸಿದರು.
ಶೀಘ್ರ ಬೆಳ್ಳಿರಥ ಸಮರ್ಪಣೆ: ‘ಮೂರನೇ ಬಾರಿಗೆ ಮೇಲುಕೋಟೆ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಚೆಲುವನಾರಾಯಣಸ್ವಾಮಿಯ ದರ್ಶನ ಭಾಗ್ಯದಿಂದ ನನಗೆ ಅಧಿಕಾರ ಲಭಿಸಿದೆ. ಅಧಿಕಾರ ಬಲದಿಂದಾಗಿ ಬಡವರಿಗೆ, ನೊಂದವರಿಗೆ ಸಹಾಯ ಮಾಡಲು ಭಗವಂತ ಶಕ್ತಿ ನೀಡಿದ್ದಾನೆ. ಇಲ್ಲಿಯ ಸ್ಥಾನೀಕರ ಮನವಿಯಂತೆ ಸ್ವಾಮಿಗೆ ಸಮರಭೂಪಾಲ ಬೆಳ್ಳಿಯ ರಥ ಮಾಡಿಸುತ್ತೇನೆ. ನಾನೇ ಬಂದು ದೇವರಿಗೆ ರಥ ಸಮರ್ಪಿಸುತ್ತೇನೆ’ ಎಂದು ವಾಗ್ಧಾನ ಮಾಡಿದರು.
ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.