ಬಂಟ್ವಾಳ: 'ಮುಡಾ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ನಡೆಸುವ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ವಯನಾಡು ಗುಡ್ಡ ಕುಸಿತದಂತಹ ಘಟನೆಗಳು ನಡೆದಿರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜೊತೆ ಮಾತುಕತೆ ನಡೆಸಿ ಪಾದಯಾತ್ರೆ ಬಗ್ಗೆ ಶೀಘ್ರವೇ ನಿಲುವು ಪ್ರಕಟಿಸುತ್ತೇವೆ' ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು.
'ಪಾದಯಾತ್ರೆಗೆ ನೈತಿಕ ಬೆಂಬಲವನ್ನೂ ನೀಡುವುದಿಲ್ಲ' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವ ಕುರಿತು ಇಲ್ಲಿ ಪ್ರತಿಕ್ರಿಯಿಸಿದ ಅವರು, 'ಜೆಡಿಎಸ್ ನಮ್ಮ ಮೈತ್ರಿ ಪಕ್ಷ. ಅವರ ಜೊತೆಯೂ ಮಾತನಾಡುತ್ತೇವೆ. ಈ ಬಗ್ಗೆ ನಮ್ಮ ಮನೆ ಒಳಗಡೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ' ಎಂದರು.
'ಎರಡೂ ಪಕ್ಷಗಳು ಸೇರಿ ಸದನದೊಳಗೆ ಒಳ್ಳೆಯ ರೀತಿ ಹೋರಾಟ ಮಾಡಿದ್ದೇವೆ. ಹೊರಗಡೆಯೂ ಅದೇ ರೀತಿ ಹೋರಾಟ ಅಗಬೇಕು ಎಂಬುದು ನಮ್ಮ ಆಶಯ. ಎಲ್ಲೆಡೆ ಮಳೆಯಾಗುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಪಾದಯಾತ್ರೆ ಮುಂದೂಡುವಂತೆ ಜೆಡಿಎಸ್ ಮುಖಂಡರಾದ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ. ನಾವು ಎರಡೂ ಪಕ್ಷಗಳ ಮುಖಂಡರು ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಸಂಜೆ ಒಳಗೆ ಸ್ಪಷ್ಟ ನಿಲುವನ್ನು ಕೇಂದ್ರ ನಾಯಕರು ಪ್ರಕಟಿಸುತ್ತಾರೆ" ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.