ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಕೆರೆಯೊಂದರಲ್ಲಿ ಇತ್ತೀಚೆಗೆ ಯುವತಿಯೊಬ್ಬಳನ್ನು ಕೊಲೆ ಮಾಡಿ ಎಸೆದಿದ್ದ ಪ್ರಕರಣವನ್ನು ಬೇಧಿಸಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಯುವತಿಯನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ತುಮಕುಂಟೆ ನಿವಾಸಿ ಸಂಧ್ಯಾ (17) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಯುವತಿಯ ತಾಯಿ, ಸಹೋದರಿ, ಸಹೋದರ ಮತ್ತು ಭಾವನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತುಮಕುಂಟೆ ನಿವಾಸಿಗಳಾದ ರಾಮಾಂಜಿನಮ್ಮ (38), ಅಶೋಕ್ (21) ಮತ್ತು ಗೌರಿಬಿದನೂರು ತಾಲ್ಲೂಕಿನ ರೆಡ್ಡಿದ್ಯಾವರಹಳ್ಳಿಯ ನಿವಾಸಿಗಳಾದ ಬಾಲಕೃಷ್ಣ (28), ನೇತ್ರಾವತಿ (19) ಬಂಧಿತ ಆರೋಪಿಗಳು
ಕೊಲೆಯಾದ ಯುವತಿ ಸಂಧ್ಯಾ ಅನ್ಯ ಜಾತಿಯ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದಳು. ಅದಕ್ಕೆ ಪೋಷಕರ ವಿರೋಧವಿತ್ತು. ಮಗಳು ಪ್ರೀತಿಸುತ್ತಿದ್ದ ಯುವಕನ ವಿರುದ್ಧ ದೂರನ್ನು ಕೂಡ ನೀಡಿದ್ದರು. ಹೀಗಾಗಿ, ಯುವಕನನ್ನು ಪೊಲೀಸರು ಪೊಕ್ಸೊ ಕಾಯ್ದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೋಷಕರ ಬುದ್ದಿಮಾತಿಗೆ ಮಣಿಯದ ಸಂಧ್ಯಾ ಜೈಲಿನಲ್ಲಿರುವ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದರು. ಇದರಿಂದ ರೋಸಿ ಹೋದ ಅವರ ತಾಯಿ, ಸಹೋದರ, ಹಿರಿಯ ಮಗಳು ಮತ್ತು ಅಳಿಯ ಜತೆ ಸೇರಿ ಕೊಲೆ ಮಾಡಿ. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಮೃತದೇಹಕ್ಕೆ ಕಲ್ಲು ಕಟ್ಟಿ ಕೆರೆಗೆ ಎಸೆದಿದ್ದರು ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.