ಜಗಳೂರು: ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿಯಾಗಿ, ತಲೆ ಮರೆಸಿಕೊಂಡಿದ್ದ ಹಾವೇರಿ ಜಿಲ್ಲೆಯ ಹಿರೇಕೆರೂರಿನ ನಕಲಿ ಸ್ವಾಮೀಜಿಯನ್ನು ಜಗಳೂರಿನಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದತ್ತಾತ್ರೇಯ ಅವಧೂತ ಸ್ವಾಮಿ ಎಂದು ಹೇಳಿಕೊಂಡ ಹಿರೇಕೆರೂರು ಪಟ್ಟಣದ ಹೊಸೂರು ನಗರದ ರಾಘವೇಂದ್ರ ಹಾಗೂ ಚಾಲಕ ಲಿಂಗರಾಜ ಅವರನ್ನು ವಂಚನೆ, ಕೊಲೆ ಯತ್ನದ ಆರೋಪದ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
ದಾವಣಗೆರೆಯ ಟಾಟಾ ಕ್ಯಾಪಿಟಲ್ ಫೈನಾನ್ಸ್ನಲ್ಲಿ ವಾಹನದ ಮೇಲೆ ರಾಘವೇಂದ್ರ ಸಾಲ ಪಡೆದಿದ್ದನು. ಸಾಲ ಮರುಪಾವತಿ ಮಾಡುವಂತೆ ಕೇಳಿದ ಏಜೆಂಟ್ ಚಮನ್ಸಾಬ್ ಅವರ ಮೇಲೆ ರಾಘವೇಂದ್ರ ಹಾಗೂ ಲಿಂಗರಾಜ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದರು. ಈ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಾನು ಅವಧೂತ ಸ್ವಾಮೀಜಿ ಎಂದು ಜನರಿಗೆ ನಂಬಿಸಿ ವಂಚಿಸಿರುವ ಹಲವು ಪ್ರಕರಣಗಳು ನ್ಯಾಯಾಲಯ
ದಲ್ಲಿ ವಿಚಾರಣೆಯ ಹಂತದಲ್ಲಿವೆ. ಸಮನ್ಸ್ ಜಾರಿ ಮಾಡಲು ಹೋದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.