ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣಅವರ ಪುತ್ರ ರಾಜೇಂದ್ರ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಗುರುವಾರ ದೂರು ಸಲ್ಲಿಸಿದರು
ಬೆಂಗಳೂರು: ‘ಮಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಾಮಿಯಾನ ಹಾಕಲು ಬಂದಿದ್ದ ಇಬ್ಬರು, ನನ್ನ ಕೊಲೆಗೆ ಪ್ರಯತ್ನಿಸಿದ್ದರು. ಅವರು ₹5 ಲಕ್ಷಕ್ಕೆ ಸುಪಾರಿ ಪಡೆದಿದ್ದಾರೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ ಅವರು ಡಿಜಿಪಿ ಅಲೋಕ್ ಮೋಹನ್ ಅವರಿಗೆ ಗುರುವಾರ ದೂರು ಸಲ್ಲಿಸಿದರು.
ದೂರಿನ ಪ್ರತಿಯಲ್ಲಿ ಯಾರೊಬ್ಬರ ಹೆಸರು ಹಾಗೂ ದೂರವಾಣಿ ಸಂಖ್ಯೆ ಉಲ್ಲೇಖಿಸಿಲ್ಲ. ಆದರೆ, ಪೆನ್ಡ್ರೈವ್ವೊಂದನ್ನು ದೂರಿನ ಪ್ರತಿಯೊಂದಿಗೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ.
ಡಿಜಿಪಿ ಅವರು ದೂರು ಸ್ವೀಕರಿಸಿದ ಬಳಿಕ ರಾಜೇಂದ್ರ ಅವರೊಂದಿಗೆ ಸ್ವಲ್ಪ ಸಮಯ ಚರ್ಚಿಸಿದರು. ಘಟನೆಯು ತುಮಕೂರಿನಲ್ಲಿ ನಡೆದಿರುವ ಕಾರಣಕ್ಕೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸುವಂತೆ ಅವರು ಸೂಚಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ರಾಜೇಂದ್ರ, ‘ಹನಿಟ್ರ್ಯಾಪ್ ಯತ್ನದ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರು ಗೃಹ ಸಚಿವರಿಗೆ ಲಿಖಿತ ದೂರು ನೀಡಿದ್ದಾರೆ. ನನ್ನ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ದೂರವಾಣಿ ಕರೆ ಮೂಲಕ ಯತ್ನ ನಡೆಯುತ್ತಿತ್ತು. ಆದರೆ, ನನ್ನ ಹತ್ಯೆಗೆ ಯತ್ನ ನಡೆದಿತ್ತು’ ಎಂದು ಹೇಳಿದರು.
‘ನವೆಂಬರ್ 16ರಂದು ತುಮಕೂರಿನ ಮನೆಯಲ್ಲಿ ನನ್ನ ಮಗಳ ಜನ್ಮದಿನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಹಿಂದಿನ ದಿವಸ ಶಾಮಿಯಾನ ಹಾಕಲು ಬಂದವರು ಕೊಲೆಗೆ ಯತ್ನಿಸಿದ್ದರು. ಅಂದು ಅವರ ಯೋಜನೆ ವಿಫಲವಾಗಿತ್ತು. ಜನವರಿಯಲ್ಲಿ ನನಗೆ ದೊರೆತ ಆಡಿಯೊದಿಂದ ಸುಪಾರಿ ನೀಡಿದ್ದ ಮಾಹಿತಿ ಲಭಿಸಿತ್ತು’ ಎಂದು ಹೇಳಿದರು.
‘ತುಮಕೂರಿನ ಸೋಮ ಹಾಗೂ ಭರತ್ ಎಂಬುವವರ ಬ್ಯಾಂಕ್ ಖಾತೆಗೆ ₹5 ಲಕ್ಷ ಜಮೆ ಮಾಡಿ, ಕೊಲೆಗೆ ಸುಪಾರಿ ನೀಡಲಾಗಿದೆ. ಆಡಿಯೊದಲ್ಲಿ ಅದು ದಾಖಲಾಗಿದೆ’ ಎಂದು ತಿಳಿಸಿದರು.
‘ನನ್ನ ಕೊಲೆಗೆ ಸುಪಾರಿ ನೀಡಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೆ. ಇನ್ನಷ್ಟು ಮಾಹಿತಿ ಕಲೆ ಹಾಕಿ ಡಿಜಿಪಿಯವರಿಗೆ ದೂರು ಸಲ್ಲಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೂಚನೆ ನೀಡಿದ್ದರು. ದೂರವಾಣಿ ಸಂಭಾಷಣೆಯ ಆಡಿಯೊ ರೆಕಾರ್ಡ್ ಸಹಿತ ಡಿಜಿಪಿ ಅವರಿಗೆ ದೂರು ನೀಡಿದ್ದೇನೆ. ಶುಕ್ರವಾರ ತುಮಕೂರು ಎಸ್ಪಿಯವರಿಗೂ ದೂರು ಸಲ್ಲಿಸುತ್ತೇನೆ’ ಎಂದು ಹೇಳಿದರು.
'ನನ್ನ ಮೇಲೆ ಯಾವುದೇ ಹನಿಟ್ರ್ಯಾಪ್ ನಡೆದಿಲ್ಲ. ತಂದೆಯವರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆರಂಭವಾಗಿದೆ. ಬೆಂಗಳೂರಿನ ಗೆಸ್ಟ್ ಹೌಸ್ ಹಾಗೂ ತುಮಕೂರಿನಲ್ಲಿ ಇರುವ ಮನೆಗೆ ಸಿಐಡಿ ಪೊಲೀಸರು ಗುರುವಾರ ಬೆಳಿಗ್ಗೆ ಬಂದಿದ್ದರು. ಮನೆಯಲ್ಲಿ ಇದ್ದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ರಾಜೇಂದ್ರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.