ಹೊಸಪೇಟೆ: ಪತ್ನಿಯ ಶೀಲ ಶಂಕಿಸಿದ ಪತಿರಾಯ ಕೊಡಲಿಯಿಂದ ಹೊಡೆದು ಆಕೆಯ ರುಂಡ ಬೇರ್ಪಡಿಸಿ ಕೊಲೆ ಮಾಡಿರುವ ಘಟನೆ ಇಲ್ಲಿನ ಟಿ.ಬಿ. ಡ್ಯಾಂ 13ನೇ ವಾರ್ಡ್ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಲಲಿತಾ (30) ಕೊಲೆಯಾದವರು. ಕೊಲೆಗೈದ ಕೆ. ಅಣ್ಣೆಪ್ಪನನ್ನು (29) ವಶಕ್ಕೆ ಪಡೆದಿರುವ ಗ್ರಾಮೀಣ ಠಾಣೆ ಪೊಲೀಸರು ಆತನನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
‘2006ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಒಂದು ಗಂಡು, ಮೂವರು ಹೆಣ್ಣು ಮಕ್ಕಳಿದ್ದಾರೆ. ಲಲಿತಾ ಅನೈತಿಕ ಸಂಬಂಧದ ಕುರಿತು ಶಂಕೆ ಹೊಂದಿದ್ದ ಅಣ್ಣೆಪ್ಪ ಪದೇ ಪದೇ ಆಕೆಯೊಂದಿಗೆ ಜಗಳವಾಡುತ್ತಿದ್ದ. ಐದು ತಿಂಗಳ ಹಿಂದೆ ಜಗಳವಾಡಿ ಲಲಿತಾಳನ್ನು ಮನೆಯಿಂದ ಹೊರಹಾಕಿದ್ದ. ಆಗಾಗ್ಗೆ ಅಣ್ಣೆಪ್ಪ ಅಲ್ಲಿಗೆ ಹೋಗಿ ಮಕ್ಕಳನ್ನು ನೋಡಿಕೊಂಡು ಬರುತ್ತಿದ್ದ. ಇತ್ತೀಚೆಗೆ ಮನೆಯ ಹಿರಿಯರು ಇಬ್ಬರಿಗೆ ಬುದ್ಧಿಮಾತು ಹೇಳಿ ರಾಜಿ ಮಾಡಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಂಗಳವಾರ (ಮೇ 5) ಲಲಿತಾ ಟಿ.ಬಿ. ಡ್ಯಾಂನ 13ನೇ ವಾರ್ಡ್ನಲ್ಲಿರುವ ಅಣ್ಣೆಪ್ಪ ಅವರ ಮನೆಗೆ ಹಿಂತಿರುಗಿದ್ದಾರೆ. ಗುರುವಾರ ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ. ಈ ವೇಳೆ ಅಣ್ಣೆಪ್ಪ ಸಿಟ್ಟಿನಿಂದ ಮನೆಯಲ್ಲಿದ್ದ ಕೊಡಲಿಯಿಂದ ಲಲಿತಾಳ ಕತ್ತು ಬೇರ್ಪಡಿಸಿ ಸಾಯಿಸಿದ್ದಾನೆ’ ಎಂದು ಹೇಳಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.