ADVERTISEMENT

ಕಲಬುರ್ಗಿ: ಪ್ರೀತಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 14:55 IST
Last Updated 10 ಜೂನ್ 2020, 14:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಡಿ: ಹುಡುಗಿಯ ಪ್ರೀತಿಗಾಗಿ ಇಬ್ಬರು ಯುವಕರ ಮಧ್ಯೆಸಂಕನೂರು ಗ್ರಾಮದ ಹೊರವಲಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಅತನೂರು ಗ್ರಾಮದ ಶಿವಕುಮಾರ (26) ಕೊಲೆಯಾದ ಯುವಕ. ಕಲ್ಲುಬಂಡೆಗಳ ಕೆಳಗಡೆಯಿಂದ ಶವದ ವಾಸನೆ ಬಂದುದರಿಂದ ಗ್ರಾಮಸ್ಥರು ಸ್ಥಳೀಯ ಠಾಣೆಗೆ ಮಂಗಳವಾರ ಮಾಹಿತಿ ನೀಡಿದ್ದರು.

ಪ್ರಕರಣದ ವಿವರ: ಅಫಜಲಪುರ ತಾಲ್ಲೂಕಿನ ಅತನೂರು ಗ್ರಾಮದ ನಿವಾಸಿ ಶಿವಕುಮಾರ ಅವರ ಮದುವೆ ಅದೇ ಗ್ರಾಮದ ಯುವತಿ ಜೊತೆ ಜೂನ್ 15ರಂದು ನಿಶ್ಚಯವಾಗಿತ್ತು. ಆದರೆ ಮದುವೆಯಾಗುವ ಹುಡುಗಿಯ ವಿಷಯಕ್ಕೆ ಸಂಬಂಧಿಸಿದಂತೆ ಶಿವಕುಮಾರ ಹಾಗೂ ಅವನ ಸ್ನೇಹಿತ ಬೋಸಗಿ ಗ್ರಾಮದ ಮಲ್ಲಿಕಾರ್ಜುನ ಮಧ್ಯೆ ಜಗಳ ನಡೆದಿದೆ.

ADVERTISEMENT

ಮಲ್ಲಿಕಾರ್ಜುನ ಉಪಾಯ ಮಾಡಿ ತನ್ನ ಸ್ನೇಹಿತನನ್ನು ಸಂಕನೂರು ಸಮೀಪದ ಗುಡ್ಡಕ್ಕೆ ಕರೆತಂದು ಕೊಲೆ ಮಾಡಿದ್ದಾನೆ. ಗುರುತು ಸಿಗಬಾರದೆಂದು ಕಲ್ಲುಬಂಡೆ ಹಾಕಿ ದೇಹವನ್ನು ವಿರೂಪಗೊಳಿಸಿದ್ದಾನೆ. ಪೊಲೀಸ್ ತನಿಖೆಯಲ್ಲಿ ಆರೋಪಿ ಮಲ್ಲಿಕಾರ್ಜುನ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಅಫಜಲಪುರ ತಾಲ್ಲೂಕಿನ ರೇವೂರು ಪೊಲೀಸ್ ಠಾಣೆಯಲ್ಲಿ ಜೂನ್‌ 10ರಂದು ಅಪಹರಣ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ಚಿತ್ತಾಪುರ ಸಿಪಿಐ ಪಂಚಾಕ್ಷರಿ ವಿ.ಸಾಲಿಮಠ ಹಾಗೂ ಸ್ಥಳೀಯ ಪಿಎಸ್ಐ ವಿಜಯಕುಮಾರ ಭಾವಗಿ ಒಂದೇ ದಿನದಲ್ಲಿ ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.