ಮೈಸೂರು: ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ 81 ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ 61 ಹುದ್ದೆಗಳು ಖಾಲಿ ಇರುವುದಾಗಿ ಸಚಿವ ಸಿ.ಟಿ.ರವಿ ಶನಿವಾರ ಇಲ್ಲಿ ತಿಳಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇರುವುದೇ ಪ್ರವಾಸೋದ್ಯಮ ಇಲಾಖೆಯಲ್ಲಿ. ಗುತ್ತಿಗೆ ಹಾಗೂ ಬೇರೆಬೇರೆ ಇಲಾಖೆಗಳಿಂದ ನಿಯೋಜನೆಗೊಂಡಿರುವ ಸಿಬ್ಬಂದಿಯಿಂದ ಇಲಾಖೆ ನಡೆಯುತ್ತಿದೆ ಎಂದು ಅವರು ಮಾಧ್ಯಮ ಸಂವಾದದಲ್ಲಿ ಹೇಳಿದರು.
‘ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಎರಡೂ ಇಲಾಖೆಗಳ ಅಧ್ಯಯನದಲ್ಲಿ ತೊಡಗಿದ್ದೇನೆ. ಕೇರಳದಲ್ಲಿ ಪ್ರವಾಸೋದ್ಯಕ್ಕೆ ಉತ್ತಮ ಉತ್ತೇಜನ ಸಿಗುತ್ತಿದೆ. ಈ ಹಿಂದೆ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರವಾಸೋದ್ಯಮ ಇಲಾಖೆಗೆ ಹೊಸ ರೂಪ ನೀಡುತ್ತೇನೆ’ ಎಂದರು.
ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು. ಖಾಸಗಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದರು.
ಕನ್ನಡ ಶಾಲೆ ಮುಚ್ಚಲು ಕಾರಣ ಇಂಗ್ಲಿಷ್: ‘ಕರ್ನಾಟಕದಲ್ಲಿ ಕನ್ನಡವೇ ಮೊದಲು. ಆದರೆ, ಹಿಂದಿ ವಿರೋಧಿಸುವುದೇ ಭಾಷಾಭಿಮಾನ ಎಂದುಕೊಂಡಿರುವ ಹೋರಾಟಗಾರರು, ಯಾವ ಕಾರಣದಿಂದ ಪ್ರಾದೇಶಿಕ ಭಾಷಾ ಶಾಲೆಗಳು ಬಾಗಿಲು ಹಾಕುತ್ತಿವೆ ಎಂಬುದನ್ನು ಅರಿಯಬೇಕು. ಹಿಂದಿ
ಯಿಂದ ಯಾವುದೇ ಪ್ರಾದೇಶಿಕ ಭಾಷೆಗೆ ಧಕ್ಕೆಯಾಗಿಲ್ಲ. ಪ್ರಾದೇಶಿಕ ಭಾಷೆಗಳನ್ನು ಕೊಲ್ಲುತ್ತಿರುವುದು, ಶಾಲೆಗಳು ಮುಚ್ಚಲು ಕಾರಣವಾಗಿರುವುದು ಇಂಗ್ಲಿಷ್’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.