ADVERTISEMENT

ಸುಮಲತಾ ಏನೂ ಕೆಲಸ ಮಾಡಲ್ಲ: ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 18:05 IST
Last Updated 13 ನವೆಂಬರ್ 2020, 18:05 IST
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ    

ಮಂಡ್ಯ: ಸಂಸದೆ ಸುಮಲತಾ ಅವರ ಕಾರ್ಯ ವೈಖರಿ ಬಗ್ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಟೀಕಿಸಿ ಮಾತನಾಡಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅವರು ಗುರುವಾರ ಬೆಂಗಳೂರಿಗೆ ತೆರಳುವಾಗ ತಾಲ್ಲೂಕಿನ ಯಲಿಯೂರು ಗೇಟ್‌ ಬಳಿ ಬೆಂಗಳೂರು–ಮೈಸೂರು ದಶಪಥ ಕಾಮಗಾರಿಯ ಬಗ್ಗೆ ಅಧಿಕಾರಿಯೊಬ್ಬರ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ.

'ದೇವೇಗೌಡರ ಕುಟುಂಬವನ್ನು ಸೋಲಿಸುವ ಉದ್ದೇಶದಿಂದ ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಅವರು ಯಾವ ಕೆಲಸ ಮಾಡುವುದಕ್ಕೂ ಬಿಡುವುದಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ’ ಎಂದು ಫೋನ್ ನಲ್ಲಿ ಮಾತನಾಡಿದ್ದಾರೆ.

ADVERTISEMENT

ಪ್ರತಾಪ್ ಸಿಂಹ ಬೆಂಗಳೂರು- ಮೈಸೂರು ದಶಪಥ ಕಾಮಗಾರಿಯ ಯೋಜನಾಧಿಕಾರಿ ಜೊತೆ ಮಾತನಾಡಿದ್ದಾರೆ. ಸುಮಲತಾ ವಿರುದ್ಧ ಅಧಿಕಾರಿ ದೂರು ಹೇಳಿದಾಗ ಪ್ರತಾಪ್ ಸಿಂಹ, ಸುಮಲತಾ ವಿರುದ್ಧವೇ ಮಾತನಾಡಿದ್ದಾರೆ ಎಂದು ಸುಮಲತಾ ಬೆಂಬಲಿಗರು ತಿಳಿಸಿದರು.

‘ಕಾಮಗಾರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಸುಮಲತಾ ಪ್ರಶ್ನಿಸಿದ್ದರು. ಇದರ ಬಗ್ಗೆ ಯೋಜನಾಧಿಕಾರಿ ಪ್ರತಾಪ್ ಸಿಂಹ ಅವರಿಗೆ ದೂರು ನೀಡಿದಾಗ ಅವರು ನಮ್ಮ ಸಂಸದೆ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಪ್ರತಾಪ್‌ ಸಿಂಹ ಅವರು ತಮ್ಮ ಕ್ಷೇತ್ರದ ಸಮಸ್ಯೆ ನೋಡಿಕೊಳ್ಳಲಿ, ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಅವರು ಬಾರದಿರುವುದೇ ಒಳ್ಳೆಯದು' ಎಂದು ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರತಾಪ್‌ ಸಿಂಹ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.