ಬೆಂಗಳೂರು: ಕಾಂಗ್ರೆಸ್ನವರು ನಾಲ್ಕು ವರ್ಷ ಅಧಿಕಾರದಿಂದ ದೂರವಿದ್ದು, ಒಂದು ರೀತಿ ಹಸಿದ ಹುಲಿಗಳಾಗಿದ್ದಾರೆ. ಆದ್ದರಿಂದ ಎಲ್ಲರೂ ಹಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ದೂರಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗುತ್ತಿಗೆದಾರರೇ ರಾಜ್ಯ ಸರ್ಕಾರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತ್ಯವನ್ನೇ ನುಡಿಯುತ್ತಿದ್ದಾರೆ. ಈ ಸರ್ಕಾರ ನೂರಕ್ಕೆ ನೂರರಷ್ಟು ಭ್ರಷ್ಟ ಎಂಬುದನ್ನೇ ಅವರದೇ ಪಕ್ಷದವರು ಹೇಳುತ್ತಿದ್ದಾರೆ ಎಂದರು.
ಕೇವಲ ಎರಡು ತಿಂಗಳಲ್ಲೇ ಸರ್ಕಾರ ಅಧಃಪತನಕ್ಕೆ ತಲುಪಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಬೇರೆಯವರ ಮಾತು ಹೋಗಲಿ ಮುಖ್ಯಮಂತ್ರಿಯವರೇ ತಮ್ಮ ಆಪ್ತರ ಬಳಿ ಎರಡೇ ತಿಂಗಳಲ್ಲಿ ನಮ್ಮ ಸರ್ಕಾರದ ಹೆಸರು ಖರಾಬಾಗುತ್ತಿದೆ ಎಂದಿರುವುದು ಗೊತ್ತಾಗಿದೆ ಎಂದು ರವಿಕುಮಾರ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೇ 16 ರ ಬಳಿಕ ಪೋಸ್ಟರ್ ಅಭಿಯಾನವೂ ಸೇರಿ ಶಾಸಕರು, ಸಂಸದರು, ಜನಪ್ರತಿನಿಧಿಗಳಿಂದ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ. ಬಹಳಷ್ಟು ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ. ಜನ ಇವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ.
ಸಚಿವರ ಚಲುವರಾಯಸ್ವಾಮಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು ಸುಳ್ಳೇ? ರಾಜ್ಯಪಾಲರು ಕ್ರಮ ಸೂಚಿದ್ದಾರಲ್ಲವೇ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣು ಎಂದಿದ್ದ ರಾಹುಲ್ಗಾಂಧಿ ಭ್ರಷ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳದೇ ಏಕೆ ಸುಮ್ಮನಿದ್ದಾರೆ? ಗುತ್ತಿಗೆದಾರರ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿರುವುದೇಕೆ ಎಂದೂ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.