ಬೆಂಗಳೂರು: ‘ನಾಡಗೀತೆಯ ಧಾಟಿ ನಿಗದಿಗೆ ಸಂಬಂಧಿಸಿದಂತೆ ಆತುರದಲ್ಲಿ ನಿರ್ಧಾರ ಕೈಗೊಳ್ಳಬಾರದು. ಇನ್ನೂ ಎರಡು ಮೂರು ಸಭೆಗಳನ್ನು ನಡೆಸಿ, ರಾಜ್ಯದ ಕವಿಗಳು, ಸಂಗೀತಗಾರರ ಸಲಹೆಗಳನ್ನು ಕ್ರೋಡೀಕರಿಸಿ ನಿರ್ಣಯ ಕೈಗೊಳ್ಳಬೇಕು’ ಎಂದು ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ‘ಮೈಸೂರು ಅನಂತಸ್ವಾಮಿ ಅವರು ಸಂಪೂರ್ಣ ನಾಡಗೀತೆಗೆ ಸ್ವರ ಸಂಯೋಜಿಸಿಲ್ಲ. ಪೂರ್ಣ ನಾಡಗೀತೆಯನ್ನು ಹಾಡಬೇಕೆಂದು ತಾವು ಆದೇಶ ನೀಡಿದಲ್ಲಿ ಅನಂತಸ್ವಾಮಿ ಅವರ ಧಾಟಿಯನ್ನು ಪರಿಗಣಿಸಲು ಬರುವುದಿಲ್ಲ. ಸಿ. ಅಶ್ವಥ್ ಅವರು ಸಂಪೂರ್ಣ ನಾಡಗೀತೆಗೆ ಸ್ವರ ಸಂಯೋಜನೆ ಮಾಡಿದ್ದು, ಸರಳವಾಗಿದೆ’ ಎಂದು ಹೇಳಿದ್ದಾರೆ.
‘ಸಿ. ಅಶ್ವಥ್ ಹಾಗೂ ಅನಂತಸ್ವಾಮಿ ಇಬ್ಬರಿಗೂ ಗೌರವ ಸಲ್ಲಿಸುವ ಸಲುವಾಗಿ ಹಾಡುವ ಅವಧಿಯನ್ನು ಕಡ್ಡಾಯಗೊಳಿಸಿ, ಈ ಇಬ್ಬರ ಧಾಟಿಯನ್ನೂ ಪರಿಗಣಿಸಬಹುದು. ಧಾಟಿಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಿ. ಅಶ್ವಥ್ ಅವರ ಧಾಟಿ ಅತ್ಯಂತ ಜನಪ್ರಿಯವಾಗಿದೆ. ಹಾಗಾಗಿ, ಅದನ್ನೂ ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.