ದಾವಣಗೆರೆ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದಲ್ಲಿ 24 ಹಿಂದುತ್ವ ಕಾರ್ಯಕರ್ತರ ಕೊಲೆಯಾಯಿತು. ಮುಸ್ಲಿಮರಿಗೇ ಬೇಡವಾಗಿದ್ದ ಟಿಪ್ಪು ಜಯಂತಿ ತಂದು ಹಿಂಸೆಗೆ ಕಾರಣರಾದರು. ವೋಟಿಗಾಗಿ ಹಿಂದೂ–ಮುಸ್ಲಿಂ ಎಂದು ಇಬ್ಭಾಗ ಮಾಡಿದರು. ಆಗ ಇದ್ದಿದ್ದು ನರಹಂತಕ ಸರ್ಕಾರ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ನಗರದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಕೃಷಿ ಬಜೆಟ್ ಮೂಲಕ ಸಾಲ, ಬಡ್ಡಿ ಮನ್ನಾ ಮಾಡಿದರು. ನಾನಾ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಕಣ್ಣೀರು ಒರೆಸುವವರಾದರು. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹೋದಲ್ಲೆಲ್ಲ ಕಣ್ಣೀರು ಸುರಿಸುವವರಾದರು. ಸಿದ್ದರಾಮಯ್ಯ ಅವರು ಜನರು ಕಣ್ಣೀರು ಹಾಕಿಸುವಂತೆ ಮಾಡಿದ ಮುಖ್ಯಮಂತ್ರಿ’ ಎಂದು ಟೀಕಿಸಿದರು.
‘ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಯಾರು ಅಧ್ಯಕ್ಷರು ಎಂಬುದೇ ಗೊತ್ತಿಲ್ಲ. ವಿಧಾನಸಭೆ ಅಧಿವೇಶನ ಫೆ.18ಕ್ಕೆ ಶುರುವಾಗಲಿದೆ. ಆದರೆ, ವಿರೋಧ ಪಕ್ಷದ ನಾಯಕರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಸಿದ್ದರಾಮಯ್ಯ ಅವರನ್ನು ಮಾಡಿದ್ರೆ ಡಿ.ಕೆ. ಶಿವಕುಮಾರ್ ಹೊರಗೆ ಹೋಗುತ್ತಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.