ADVERTISEMENT

ತೋಟಗಾರಿಕೆ ಮೇಳ: 11 ಸಾವಿರ ಜನ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 21:15 IST
Last Updated 23 ಫೆಬ್ರುವರಿ 2023, 21:15 IST
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನ ತಾಕುಗಳಲ್ಲಿ ಹಾಕಲಾಗಿದ್ದ ನೂತನ ತಳಿಗಳ ಬೆಳೆಗಳನ್ನು ವೀಕ್ಷಿಸುತ್ತಿರುವ ಮಹಿಳೆಯರು.    –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನ ತಾಕುಗಳಲ್ಲಿ ಹಾಕಲಾಗಿದ್ದ ನೂತನ ತಳಿಗಳ ಬೆಳೆಗಳನ್ನು ವೀಕ್ಷಿಸುತ್ತಿರುವ ಮಹಿಳೆಯರು. –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಹೆಸರಘಟ್ಟದ ಐಐಎಚ್‌ಆರ್‌ ಆವರಣದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಗುರುವಾರ 11 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು.

ಮೇಳದಲ್ಲಿ ಮೊದಲ ದಿನ (ಬುಧವಾರ) ಹೆಚ್ಚು ಜನ ಇರಲಿಲ್ಲ. ರೈತರೂ ಸಹ ಮೇಳದಲ್ಲಿ ಬೆರಳೆಣಿಕೆ ಎಂಬಂತೆ ಭಾಗವಹಿಸಿದ್ದರು. ಆದರೆ, ಎರಡನೇ ದಿನವಾದ ಗುರುವಾರ ಭೇಟಿ ನೀಡಿದ ರೈತರ ಸಂಖ್ಯೆ ಹೆಚ್ಚಾಗಿತ್ತು. ‌ಸಾರ್ವಜನಿಕರೂ ಕುಟುಂಬ ಸಮೇತರಾಗಿ ಮೇಳ ವೀಕ್ಷಿಸಿದರು.

ಐಐಎಚ್‌ಆರ್‌ ಆವರಣದಲ್ಲಿ ಬೆಳೆದಿರುವ ಎಲೆ ಸೂರುಗು ರೋಗ ಬಾಧಿಸದ ಬದನೆಕಾಯಿಯ ನೂತನ ತಳಿಗಳಾದ ಅರ್ಕಾ ಹರ್ಷಿತಾ, ಅವಿನಾಶ್ ತಳಿಗಳ ರೈತರನ್ನು ಆರ್ಕಷಣೆಯಾಗಿದ್ದವು. ‘ಈ ತಳಿಯ ಬದನೆಕಾಯಿ ಬೆಳೆ ಒಂದು ಹೆಕ್ಟೇರ್‌ನಲ್ಲಿ 35–40 ಟನ್‌ ಬೆಳೆಯಬಹುದು. ಕೇರಳ, ತಮಿಳುನಾಡು, ಬೆಂಗಳೂರು ಮತ್ತು ಮೈಸೂರು ಭಾಗಗಳಲ್ಲಿ ಈ ತಳಿಯ ಬದನೆಕಾಯಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಪ್ರಧಾನ ವಿಜ್ಞಾನಿ ಟಿ.ಎಚ್ ಸಿಂಗ್‌ ವಿವರಿಸಿದರು.

ADVERTISEMENT

ಮೇಳಕ್ಕೆ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ತೋಟಗಳಿಗೆ ತೆರಳಿ ಅಲ್ಲಿದ್ದ ಬಣ್ಣ ಬಣ್ಣದ ಹೂಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

‘ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಹರಿಯಾಣ, ಛತ್ತೀಸ್‌ಗಢದಿಂದ ತೋಟಗಾರಿಕೆ ಮೇಳಕ್ಕೆ 2000ಕ್ಕೂ ಹೆಚ್ಚು ರೈತರು ಭೇಟಿ ನೀಡಿದ್ದರು. ಬೀಜ ಮತ್ತು ನಾಟಿ ವಸ್ತುಗಳಿಗೆ ಭಾರಿ ಬೇಡಿಕೆ ಕಂಡು ಬಂದಿತು’ ಎಂದು ಆಯೋಜಕರು ಮಾಹಿತಿ ನೀಡಿದರು.

ಒಂದೂವರೆ ವರ್ಷಕ್ಕೆ ಫಸಲು ನೀಡುವ ಹಲಸು: ಆಳೆತ್ತರ ಬೆಳೆಯುವಷ್ಟರಲ್ಲೇ ಫಸಲು ಬಿಡುವ ನಿನ್ನಿಕಲ್ಲು ತಳಿಯ ಹಲಸಿನ ಸಸಿಗಳನ್ನು ರೈತರು ಮತ್ತು ಸಾರ್ವಜನಿಕರು ಖರೀದಿಸಿದರು.

‘ಅತ್ಯಂತ ಬೇಗ ಫಸಲು ನೀಡುವ ತಳಿ ಇದಾಗಿದೆ. ನಮ್ಮದೇ ನರ್ಸರಿಯಲ್ಲಿ ಅಭಿವೃದ್ಧಿಪಡಿಸಿ ರೈತರಿಗೆ ಮಾರಲಾಗುತ್ತಿದೆ’ ಎಂದು ಜಾಕ್ ಅನಿಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.