ಬೆಂಗಳೂರು: ಅರ್ಹ ಫಲಾನುಭವಿಗಳಿಗೆ ‘ಮನೆ ಬಾಗಿಲಿಗೇ ಮಾಸಾಶನ’ ಅಭಿಯಾನದ ಮೂಲಕ ಪಿಂಚಣಿ ತಲುಪಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಮನೆ ಬಾಗಿಲಲ್ಲೇ ಪಿಂಚಣಿ ಮಂಜೂರಾತಿ ಮಾಡುವ ‘ನವೋದಯ’ ಆ್ಯಪ್ ಮತ್ತು ತಂತ್ರಾಂಶಕ್ಕೆ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಹಿರಿಯ ನಾಗರಿಕ ರಿಗೆ ಈ ಯೋಜನೆಯ ಪ್ರಯೋ ಜನ ಸಿಗಲಿದೆ. ಎರಡನೇ ಹಂತದಲ್ಲಿ ವಿಧವೆಯರು, ಅಂಗ ವಿಕಲರು ಸೇರಿದಂತೆ ಉಳಿದ ಎಲ್ಲ ಪಿಂಚಣಿದಾರರಿಗೆ ಯೋಜನೆ ಜಾರಿ ಮಾಡಲು ಕ್ರಮ ವಹಿಸಲಾಗುವುದು’ ಎಂದರು.
‘ಇಷ್ಟು ದಿನ ಪಿಂಚಣಿಗಾಗಿ ಫಲಾನುಭವಿಗಳು ಕಷ್ಟಪಡುತ್ತಿದ್ದರು. ಫಲಾನುಭವಿಗಳು ಸರ್ಕಾರಿ ಕಚೇರಿಗೆ ಹೋಗಿ, ಅಧಿಕಾರಿಗಳ ಬಳಿ ಕೈ ಕಟ್ಟಿ ನಿಲ್ಲಬೇಕಿತ್ತು,ಅದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಇನ್ನು ಮುಂದೆ ಮಧ್ಯವರ್ತಿಗಳು ಇಲ್ಲದೇ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ’ ಎಂದರು.
ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ‘ಇಷ್ಟು ವರ್ಷದಲ್ಲಿ ಈ ಯೋಜನೆ ಯಾಕೆ ಜಾರಿಗೆ ತಂದಿಲ್ಲ ಎಂದು ಆಶ್ಚರ್ಯವಾಗಿದೆ. ಹಿಂದಿನ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಬೇಕಿತ್ತು. ಆದರೆ, ಅವರು ಅದರ ಕಡೆ ಗಮನಹರಿಸಿರಲಿಲ್ಲ’ ಎಂದರು.
‘ಉಡುಪಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದೆ. ಅದು ಯಶಸ್ವಿ ಯಾದ ಬಳಿಕ ರಾಜ್ಯದಾದ್ಯಂತ ಜಾರಿ ಮಾಡುತ್ತಿದ್ದೇವೆ. ಆಧಾರ್ ಲಿಂಕ್ ಮಾಡುವುದರಿಂದ ಸರಳವಾಗಿ ಪಿಂಚಣಿ ವಿತರಣೆ ಸಾಧ್ಯವಾಗಲಿದೆ. ಅಲ್ಲದೆ, ಅರ್ಹತೆ ಇಲ್ಲದವರಿಗೆ ಪಿಂಚಣಿ ಸಿಗುವುದಿಲ್ಲ. ಅಂಚೆ ಕಚೇರಿ ಮೂಲಕ ಪಿಂಚಣಿ ಬಟವಾಡೆ ಇರುವುದಿಲ್ಲ’ ಎಂದರು. ‘ಇಷ್ಟು ದಿನ ಒಬ್ಬ40–50 ಪಿಂಚಣಿದಾರರ ಕಾರ್ಡ್ ಪಡೆದು ಮಧ್ಯವರ್ತಿಗಳು ವಂಚನೆ ಮಾಡುತ್ತಿದ್ದರು. ಇನ್ನು ಅದಕ್ಕೆ ಅವಕಾಶ ಇಲ್ಲ. ಒಬ್ಬ
ರಿಗೆ ಒಂದೇ ಪಿಂಚಣಿ ಸಿಗಲಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.