ಸೋಮವಾರಪೇಟೆ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣ ಸಂಬಂಧ ಬೆಟ್ಟದಳ್ಳಿ ಗ್ರಾಮದ ಬಿ.ಯು.ಪ್ರಸನ್ನ ಎಂಬುವರು ಬುಧವಾರ ಇಲ್ಲಿ ಕ್ಷಮೆಯಾಚಿಸಿದರು.
‘ಕೆಎಸ್ಆರ್ಟಿಸಿಯ ಮಡಿಕೇರಿ ಘಟಕದ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೋಮವಾರಪೇಟೆಯ ಬಸ್ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಮೊಬೈಲ್ ಚಾರ್ಚ್ಗೆ ಹಾಕಿಟ್ಟು ಹೊರಗೆ ಹೋಗಿದ್ದಾಗ ಯಾರೋ ಕಿಡಿಗೇಡಿಗಳು ನನ್ನ ಫೇಸ್ಬುಕ್ ಖಾತೆಯಿಂದ ಶ್ರೀಗಳ ವಿರುದ್ಧ ಅವಹೇಳನಕಾರಿಯಾದ ಪೋಸ್ಟ್ ಹಾಕಿದ್ದರು’ ಎಂದು ಪ್ರಸನ್ನ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಎರಡು ದಿನಗಳ ನಂತರ ಇದು ಗಮನಕ್ಕೆ ಬಂತು. ಆ ಪೋಸ್ಟ್ ಅನ್ನು ಕೂಡಲೇ ತೆಗೆದು ಹಾಕಿದೆ. ಶಿವಕುಮಾರ ಸ್ವಾಮೀಜಿ ಬಗ್ಗೆ ನನಗೆ ಅಪಾರ ಗೌರವವಿದೆ. ನಾನೂ ಅವರ ಭಕ್ತ. ಫೇಸ್ಬುಕ್ ಪೋಸ್ಟ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದರು.
ಪ್ರಸನ್ನ ಅವರು ‘ಮನೀಶ್ ಮಣಿಕಂಠ’ ಎಂಬ ಹೆಸರಿನಲ್ಲಿ ಖಾತೆ ಹೊಂದಿದ್ದು, ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಪ್ರಕಟಗೊಂಡಿತ್ತು. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮನೀಶ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಮನೀಶ್ ಅವರನ್ನು ಬಂಧಿಸುವಂತೆ ವಿವಿಧ ಸಂಸ್ಥೆ– ಸಂಘಟನೆಗಳು ಆಗ್ರಹಿಸಿದ್ದವು.
ಪತ್ರಿಕಾ ಗೋಷ್ಠಿಯಲ್ಲಿ ದಲಿತ ಸಂಘಟನೆಯ ಹೊನ್ನಪ್ಪ, ಬಿ.ಆರ್. ಉತ್ತಯ್ಯ, ಎಸ್.ಆರ್. ಬಸವರಾಜು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.