ಕೆ.ಆರ್.ಪೇಟೆ: ‘ಜೆಡಿಎಸ್ ಪಕ್ಷ ಸಂಕಷ್ಟ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಜನರು ದಯಮಾಡಿ ನಮ್ಮ ಕೈಹಿಡಿಯಬೇಕು’ ಎಂದು ಜೆಡಿಎಸ್ ಯುವ ಮುಖಂಡ ಕೆ.ನಿಖಿಲ್ ಮನವಿ ಮಾಡಿದರು.
ಮಾಕವಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಾ ‘ಎಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ನಾರಾಯಣಗೌಡ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ. ಇಂದು ನಮ್ಮ ಪಕ್ಷ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು ಜನರು ಜೆಡಿಎಸ್ ಪಕ್ಷವನ್ನು ಉಳಿಸಬೇಕು’ ಎಂದರು.
‘ಕಳೆದ ಲೋಕಸಭಾ ಚುನಾವಣೆ ನನಗೆ ಸಾಕಷ್ಟು ಪಾಠ ಕಲಿಸಿದೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ ದೊಡ್ಡ ಪಾಠವಾಗಿದೆ. ಷಡ್ಯಂತ್ರದಿಂದ ನಾನು ಸೋತಿರಬಹುದು, ಆದರೆ ಜನರು ನನಗೆ ಮೋಸ ಮಾಡಿಲ್ಲ. ನನ್ನ ಮನಸ್ಸಿನಲ್ಲಿ ಸೋಲಿನ ನೋವಿಲ್ಲ. ಸಮ್ಮಿಶ್ರ ಸರ್ಕಾರ ಮಂಡ್ಯ ಜಿಲ್ಲೆಗೆ ನೀಡಿದ್ದ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಡೆ ಹಿಡಿದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮತ ಕೇಳಲು ಅವರು ನೈತಿಕತೆ ಉಳಿಸಿಕೊಂಡಿಲ್ಲ’ ಎಂದರು.
‘ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಅವರ ಪರ ಪ್ರಚಾರ ನಡೆಸುತ್ತೇನೆ. ಶರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ಯಾವುದಾದರೂ ಒಂದು ದಿನ ಬಂದು ಪ್ರಚಾರ ನಡೆಸುವಂತೆ ತಿಳಿಸಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.