ADVERTISEMENT

ಲೇಖಕಿ ನಿರ್ಮಲಾ ಎಲಿಗಾರ್‌ ಸದಸ್ಯತ್ವ ರದ್ದು: ವಿವಿಧ ಲೇಖಕಿಯರಿಂದ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:31 IST
Last Updated 11 ಮಾರ್ಚ್ 2023, 19:31 IST
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು   

ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆಯನ್ನು ಪ್ರಶ್ನಿಸಿದ್ದ ಲೇಖಕಿ, ಚಂದನ ವಾಹಿನಿ ಕಾರ್ಯಕ್ರಮ ಮುಖ್ಯಸ್ಥೆ ನಿರ್ಮಲಾ ಸಿ.ಎಲಿಗಾರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವದಿಂದ ಅಮಾನತು ಮಾಡಿರುವ ಕ್ರಮವನ್ನು ಹಲವು ಲೇಖಕಿಯರು ಖಂಡಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ಉತ್ತರ ಪಡೆಯುವ ಎರಡೂ ಹಕ್ಕುಗಳಿರುತ್ತವೆ. ಈ ಹಕ್ಕುಗಳನ್ನು ಮೊಟಕುಗೊಳಿಸಿ ಕನ್ನಡತನದ ಸಾಕ್ಷಿಯಂತಿರುವ ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರದ ಕ್ರಮ ಕೈಗೊಂಡಿರುವುದು ಶೋಭೆ ತರುವ ಕೆಲಸವಲ್ಲ. ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆ ಎಂದು ಹೇಳಿದ್ದಾರೆ.

ಕೊಟ್ಟ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರ ಹೆಸರಿನ ಪ್ರಶಸ್ತಿಗಳು ಇಂತಹ ಗುದ್ದಾಟಗಳಲ್ಲಿ ಅವಮಾನಕ್ಕೆ ಒಳಗಾಗಬಾರದು. ಇದು ಪರಂಪರೆಯಾಗಬಾರದು. ಇದು ಪರಿಷತ್ತಿನ ಘನತೆಗೆ ಕುಂದುತರುವಂತಹ ಕ್ರಮ. ತಕ್ಷಣ ಅವರ ಅಮಾನತು ಆದೇಶ ಹಿಂತೆಗೆದುಕೊಳ್ಳಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ಹೇಮಲತಾ ಮಹಿಷಿ, ವಿಜಯಾ, ನಾಗಮಣಿ ಎಸ್.ರಾವ್, ಲೀಲಾದೇವಿ ಆರ್. ಪ್ರಸಾದ್ ಸೇರಿ ಇತರೆ 27 ಪದಾಧಿಕಾರಿಗಳು, ಸಲಹಾ ಸಮಿತಿ ಸದ‌ಸ್ಯೆಯರು ಒತ್ತಾಯಿಸಿದ್ದಾರೆ.

ADVERTISEMENT

ಪ್ರತಿರೋಧ ಅಗತ್ಯ: ಬರಗೂರು
ನಿರ್ಮಲಾ ಎಲಿಗಾರ್‌ ಸದಸ್ಯತ್ವ ಅಮಾನತು ಪ್ರಕರಣವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಖಂಡಿಸಿದ್ದಾರೆ. ಎಂಥ ಸ್ಥಾನದಲ್ಲಿದ್ದರೂ ಅವರನ್ನು ಪ್ರಶ್ನಿಸುವ ಹಕ್ಕನ್ನು ಪ್ರಜಾಪ್ರಭುತ್ವ‌ ನಾಗರಿಕರಿಗೆ ನೀಡಿದೆ. ಇಂತಹ ಸಾಮಾನ್ಯ ಜ್ಞಾನವನ್ನೂ ಅಳವಡಿಸಿಕೊಳ್ಳದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಾಂಸ್ಕೃತಿಕ ಮೌಲ್ಯಕ್ಕೆ ಧಕ್ಕೆ ತಂದಿದ್ದಾರೆ. ಸಾಹಿತ್ಯ ಪರಿಷತ್ತಿನ ಪರಂಪರೆಗೆ ಅವಮಾನ ಮಾಡಿದ್ದಾರೆ. ರಾಜಕೀಯ ಪಕ್ಷಗಳನ್ನೂ ಮೀರಿಸಿದ್ದಾರೆ. ಇಂತಹ ನಡೆ ವಿರುದ್ಧ ಸಾಂಸ್ಕೃತಿಕ ಕ್ಷೇತ್ರ ಪ್ರತಿರೋಧ ಒಡ್ದುವುದು ಅಗತ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.