ADVERTISEMENT

ಕೋವಿಡ್-19 ಮುಕ್ತಿಗೆ ಕೈಲಾಸ ರಾಷ್ಟ್ರದಲ್ಲಿ ನಿತ್ಯಾನಂದ ಸ್ವಾಮೀಜಿ ವ್ರತ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 11:22 IST
Last Updated 17 ಮಾರ್ಚ್ 2020, 11:22 IST
ನಿತ್ಯಾನಂದ ಸ್ವಾಮೀಜಿ
ನಿತ್ಯಾನಂದ ಸ್ವಾಮೀಜಿ   

ರಾಮನಗರ: ಕೊರೊನಾ ವೈರಸ್‌ ಮುಕ್ತಿಗೆ ತಾನೇ ಘೋಷಿಸಿಕೊಂಡಿರುವ ಕೈಲಾಸ ರಾಷ್ಟ್ರದಲ್ಲಿ 28 ದಿನಗಳ ಉಪವಾಸ ವ್ರತ ಮತ್ತು ವಿಶೇಷ ಪ್ರಾರ್ಥನೆಯನ್ನು ಆರಂಭಿಸಿರುವುದಾಗಿ ಬಿಡದಿಯ ನಿತ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಸೋಮವಾರ ಇ-ಮೇಲ್ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿತ್ಯಾನಂದ ಸ್ವಾಮೀಜಿ ಮಾರ್ಚ್ 13ರಿಂದ ಉಪವಾಸ ವ್ರತ, ಧ್ಯಾನ ಮತ್ತು ಸ್ವಾಸ್ಥ ಜೀವನಕ್ಕಾಗಿ ಮಹಾವಾಕ್ಯದ ಪಠಣ ಮತ್ತು ‘ಪಚ್ಚೈ ಪತ್ತಿನಿ ವ್ರತಂ’ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಸತ್ಸಂಗದ ಕಾರ್ಯಕ್ರಮದ ಮೂಲಕ ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದರುವ ನಿತ್ಯಾನಂದ, ‘ಕೊರೊನಾ ವೈರಸ್ ಬಗ್ಗೆ ಆತಂಕ ಪಡಬಾರದು. ತಮ್ಮ ಶಿಷ್ಯರೆಲ್ಲರು ಪಚ್ಚೈ ಪತ್ತಿನಿ ವ್ರತಂ ಆಚರಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

ವ್ರತದ ಬಗ್ಗೆ ಮಾಹಿತಿ ನೀಡಿರುವ ಅವರು ಸಮಯಾಪುರದ ಮಾರಿಯಮ್ಮ ದೇವರನ್ನು ಉಲ್ಲೇಖಿಸಿದ್ದಾರೆ. ದೇವಿಗೆ ನೈವೈದ್ಯ ನೀಡುವ ಎಳನೀರು, ಬೆಲ್ಲದ ನೀರು, ಹೆಸರು ಬೇಳೆ ನೆನೆಸಿದ ನೀರು, ಮಜ್ಜಿಗೆ , ಕಬ್ಬಿನ ಹಾಲನ್ನು ಮಾತ್ರ ಉಪವಾಸದ ವೇಳೆ ಸೇವಿಸಬಹುದು ಎಂದು ತಮ್ಮ ಶಿಷ್ಯ ಗಣಕ್ಕೆ ತಿಳಿಸಿದ್ದಾರೆ.

ಧ್ಯಾನದ ವೇಳೆ ಓಂ ನಿತ್ಯಾನಂದ ಪರಮಶಿವೋಹಮ್ ಎಂಬ ಮಹಾವಾಕ್ಯವನ್ನು ಪಠಿಸುವಂತೆಯೂ ಸೂಚನೆ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪದ್ದತಿಯನ್ನು ಅನುಸರಿಸುವ ಮೂಲಕ ಕೋವಿಡ್ 19 ವೈರಸ್‌ನಿಂದ ಮುಕ್ತಿ ಹೊಂದಬಹುದು. ಋಷಿ ಮುನಿಗಳು ಸೂಚಿಸಿರುವ ಈ ಪರಿಹಾರೋಪಾಯಗಳಲ್ಲೆವು ವೈಜ್ಞಾನಿಕ ತಳಹದಿಯ ಮೇಲಿದೆ. ಈ ವ್ರತದ ಆಚರಣೆ ಮತ್ತು ಮಹಾವಾಕ್ಯ ಪಠಣದಿಂದ ಮಾರಿಯಮ್ಮ ದೇವರು ಸಂತುಷ್ಟಳಾಗುವಳು ಎಂದು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯ ಕೊನೆಯಲ್ಲಿ ಅವರು ವೈದ್ಯಕೀಯ ಚಿಕಿತ್ಸಾ ಪದ್ದತಿಗೆ ತಮ್ಮ ಸಲಹೆ ಮತ್ತು ಪರಿಹಾರೋಪಾಯಗಳು ಬದಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯರ ಸಲಹೆ ಪಡೆಯುವಂತೆಯೂ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.