ADVERTISEMENT

ಸರ್ಕಾರಿ ವೈದ್ಯರ ಖಾಸಗಿ ಕೆಲಸಕ್ಕೆ ನಿರ್ಬಂಧವಿಲ್ಲ

ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 20:27 IST
Last Updated 1 ಜುಲೈ 2018, 20:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರು ತಮ್ಮ ಕೆಲಸದ ಅವಧಿ ಹೊರತಾಗಿ ಬೇರೆ ಸಮಯದಲ್ಲಿ ಖಾಸಗಿಯಾಗಿ ಚಿಕಿತ್ಸೆ ನೀಡಲು ಯಾವುದೇ ನಿರ್ಬಂಧ ಇಲ್ಲ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೊಸದಾಗಿ 357 ಮಂದಿ ವೈದ್ಯರ ನೇಮಕಕ್ಕೆ ಅರ್ಜಿ ಕರೆಯಲಾಗಿದೆ. ಸದ್ಯದಲ್ಲಿಯೇ ಅವರಿಗೆ ಕೌನ್ಸೆಲಿಂಗ್ ನಡೆಸಲಾಗುವುದು. ನಾಲ್ಕು ವಿಭಾಗಗಳ ಮಟ್ಟದಲ್ಲಿ ನೇಮಕಾತಿ ಮಾಡಿಕೊಂಡು ಆಯಾ ಪ್ರದೇಶದಲ್ಲಿಯೇ ಅವರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಪಕ್ಷ ನಾನು ಬಯಸಿದ್ದ ಖಾತೆ ನೀಡಿಲ್ಲ. ಹಾಗೆಂದು ಬೇಸರವೂ ಇಲ್ಲ. ನನ್ನ ಇಲಾಖೆಯ ಕೆಲಸ ಈಗಾಗಲೇ ಟೇಕಾಫ್ ಆಗಿದೆ. ಈಗಾಗಲೇ ಮೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಸರ್ಕಾರದ ಅವಧಿ ಒಂದು ವರ್ಷ’ ಎಂಬ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಾನಂದ ಪಾಟೀಲ, ‘ಒಂದು ವರ್ಷದ ನಂತರ ನೋಡೋಣ ಬಿಡಿ. ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಇದ್ದರೆ ಅದನ್ನು ಸಮನ್ವಯ ಸಮಿತಿ ನೋಡಿಕೊಳ್ಳುತ್ತದೆ’ ಎಂದರು.

‘ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ಎಂ.ಬಿ.ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬಹುದು, ಸಿಗದೇ ಇರಬಹುದು. ನನಗೆ ಸಹಕರಿಸುತ್ತೇನೆ ಎಂದು ಅವರೇ ಹೇಳಿದ್ದಾರೆ. ಹಿಂದಿನ ಸರ್ಕಾರದಲ್ಲಿ ಬಾಗಲಕೋಟೆ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ವಿಜಯಪುರ ಜಿಲ್ಲೆಗೆ ಆ ಅವಕಾಶ ಸಿಕ್ಕರೆ ಸಂತೋಷ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಿದರೆ ನಿಭಾಯಿಸುವುದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.