ಬೆಂಗಳೂರು: ಬರಗಾಲ ಇದ್ದರೂ ರೈತರ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಈ ಹಿಂದೆ ರೈತರ ಸಾಲ ಮನ್ನಾ ಮಾಡಿದರೂ ಅದು ಪರಿಪೂರ್ಣವಾಗಿ ಜಾರಿಗೆ ಬಂದಿಲ್ಲ. ಸಣ್ಣ ಮತ್ತು ಮಧ್ಯಮ ರೈತರು ಆಧಾರ್ ಜೋಡಣೆ ಮಾಡದೇ ಇರುವುದು, ಪಡಿತರ ಚೀಟಿಗೂ ಆಧಾರ್ಗೂ ತಾಳೆಯಾಗದ ಕಾರಣ ಸಾಲ ಮನ್ನಾದಡಿ ಸಹಕಾರ ಬ್ಯಾಂಕ್ಗಳಿಗೆ ಇನ್ನೂ ₹388 ಕೋಟಿ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ರೈತರು ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಕಟ್ಟಿದರೆ ಬಡ್ಡಿ, ಚಕ್ರ ಬಡ್ಡಿಯಿಂದ ರಿಯಾಯ್ತಿ ನೀಡಲು ತೀರ್ಮಾನಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆಯಬೇಕು. ಆದರೆ ಕೊನೆ ದಿನಾಂಕ ವಿಸ್ತರಿಸುವುದಿಲ್ಲ. ಈ ಯೋಜನೆಯನ್ನು ರೈತರು ಬಳಸಿಕೊಂಡರೆ ಸರ್ಕಾರಕ್ಕೆ ₹540 ಕೋಟಿ ಬೇಕಾಗುತ್ತದೆ ಎಂದೂ ತಿಳಿಸಿದರು.
ಈ ಹಿಂದೆ ಬಡ್ಡಿ ಮನ್ನಾ ಮಾಡಿದಾಗ ₹140 ಕೋಟಿ ಹೊರೆ ಆಗಿತ್ತು. ಎಲ್ಲ ರೈತರು ಸಾಲ ಮರುಪಾವತಿ ಮಾಡಿದರೆ ₹540 ಕೋಟಿ ಬೇಕಾಗುತ್ತದೆ. ಆದರೆ, ಶೇ 50ರಷ್ಟು ರೈತರು ಮಾತ್ರ ಸಾಲ ಮರುಪಾವತಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರಕ್ಕೆ ₹200 ಕೋಟಿ ಹೊರೆ ಆಗಬಹುದೆಂದು ಅಂದಾಜು ಮಾಡಲಾಗಿದೆ ಎಂದು ರಾಜಣ್ಣ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.