BYV
ಬೆಂಗಳೂರು: ತುಮಕೂರು ಜಿಲ್ಲೆಯ ಚಿಂಕಾರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ‘ಎಕ್ಸ್’ ಮಾಡಿರುವ ಅವರು, ಸಚಿವರ ಗಮನಕ್ಕೂ ಬಾರದಂತೆ ಅಧಿಕಾರಿಗಳು 120 ಎಕರೆಯಲ್ಲಿ ಗಣಿಗಾರಿಕೆಗೆ ಶಿಫಾರಸು ಮಾಡಿರುವುದು ಪರಿಸರ ಪ್ರೇಮಿಗಳಿಗೆ ದಿಗಿಲು ಹುಟ್ಟಿಸಿದೆ ಎಂದು ಹೇಳಿದ್ದಾರೆ.
ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಗುರುತಿಸಲಾಗಿರುವ ಈ ಪ್ರದೇಶದಲ್ಲಿ 17,200 ಮರಗಳು ಹನನವಾಗುತ್ತವೆ ಎಂದರೆ ಈ ಸರ್ಕಾರದ ಅವಧಿಯಲ್ಲಿ ಅರಣ್ಯ ನಾಶಕ್ಕೆ ಅಧಿಕಾರಿಗಳು ಟೊಂಕಕಟ್ಟಿ ನಿಂತಂತಿದೆ. ಚಿಂಕಾರದಲ್ಲಿ ಗಣಿಗಾರಿಕೆ ಆರಂಭಿಸಲು ನಡೆದಿರುವ ಅರಣ್ಯ ದೌರ್ಜನ್ಯ ನಿರ್ಧಾರದ ವಿರುದ್ಧ ಸರ್ಕಾರ ಈ ಕೂಡಲೇ ಕ್ರಮ ಕೈಗೊಂಡು, ಗಣಿಗಾರಿಕೆಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ನಿರ್ಧಾರ ಪ್ರಕಟಿಸಲಿ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರಿಸರ ಮತ್ತು ಅರಣ್ಯ ರಕ್ಷಿಸುವ ನಿಟ್ಟಿನಲ್ಲಿ ದಿನೇ ದಿನೇ ಬದ್ಧತೆ ಕೊರತೆ ಎದ್ದು ಕಾಣುತ್ತಿದೆ. ಭ್ರಷ್ಟ ಅಧಿಕಾರಿಗಳು ಕುಗ್ಗುತ್ತಿರುವ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ರಕ್ಷಿಸುವ ಬದಲು ಇನ್ನಷ್ಟು ಕುಗ್ಗಿಸಲು ಹೊರಟು, ವನ್ಯಜೀವಿಗಳ ಅಸ್ತಿತ್ವ ಹಾಗೂ ಪರಿಸರ ನಾಶಕ್ಕೆ ಕೈಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.