ಕಾರವಾರ: ‘ಶಿಕ್ಷಕರಿಗೆ ಮುಂದಿನ ಮಾರ್ಚ್ವರೆಗೂ ಯಾವುದೇ ರೀತಿಯ ತರಬೇತಿ ಹಮ್ಮಿಕೊಳ್ಳದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೆ ಇನ್ನು ಮೂರು ತಿಂಗಳಿದ್ದು, ಅಷ್ಟೂ ದಿನಗಳನ್ನು ಮಕ್ಕಳಿಗೆ ಪಾಠ ಮಾಡಲೆಂದೇ ಶಿಕ್ಷಕರು ಬಳಸಿಕೊಳ್ಳಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹೊನ್ನಾವರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಿಕ್ಷಕರನ್ನು ಈ ಅವಧಿಯಲ್ಲಿ ಯಾವುದೇ ತರಬೇತಿಗಳಿಗೆ ನಿಯುಕ್ತಿ ಮಾಡದಂತೆ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರದವರಿಗೂ ಸೂಚನೆ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಅವಧಿಗೆ ತೊಂದರೆ ಆಗದಂತೆ ತರಬೇತಿಯ ವೇಳಾಪಟ್ಟಿ ತಯಾರಿಸುವಂತೆ ತಿಳಿಸಲಾಗಿದೆ. ತಮ್ಮನ್ನು ತರಬೇತಿಗಳಿಗೆ ನಿಯೋಜಿಸಲಾಗುತ್ತಿದೆ ಎಂದು ಶಿಕ್ಷಕರೂ ಬಹಳ ಸಲ ಗಮನಕ್ಕೆ ತಂದಿದ್ದಾರೆ. ಅದಕ್ಕೋಸ್ಕರ ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು.
‘ನಾನು ಭೇಟಿ ನೀಡಿದ ಎಲ್ಲ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಿ ತರಬೇತಿ ನೀಡಲು ಆರಂಭಿಸಿದ್ದಾರೆ. ಅವರನ್ನು ಶಿಕ್ಷಕರು 45ರಿಂದ 50 ಅಂಕಗಳು ಬರುವಂತೆ ಸಜ್ಜುಗೊಳಿಸುವ ವಿಶ್ವಾಸವಿದೆ. ಎಲ್ಲ ವಿಷಯಗಳಲ್ಲಿ ಆಸಕ್ತಿ ಬರುವಂತೆ ರಸಪ್ರಶ್ನೆ ಹಮ್ಮಿಕೊಳ್ಳುತ್ತಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಮಾದರಿಯಲ್ಲಿ ‘ಕೌನ್ ಬನೇಗಾ ಗಣಿತಾಧಿಪತಿ’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.