ಬೆಂಗಳೂರು: ‘ಕೆಂಪಣ್ಣನವರಿಗೆ ಜ್ಞಾನವಿಲ್ಲ, ಅವರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲ, ಗುತ್ತಿಗೆದಾರರೂ ಅಲ್ಲ. ರಾಜ್ಯ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಆಧಾರರಹಿತ’ ಎಂದು ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘ ಆರೋಪಿಸಿದೆ.
ರಾಜ್ಯದಲ್ಲಿ ಹಿಂದಿನಿಂದಲೂ ಕಮಿಷನ್ ವ್ಯವಹಾರವಿದೆ. ಆದರೆ ಕೆಂಪಣ್ಣನವರು ಆರೋಪಿಸಿರುವಷ್ಟು ಪ್ರಮಾಣದಲ್ಲಿ ಇಲ್ಲ ಎಂದು ಸಂಘದ ಅಧ್ಯಕ್ಷ ಸುಭಾಸ ಬಿ. ಪಾಟೀಲ ಶನಿವಾರನಡೆದಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದ ಯಾವುದೇ ಒಂದು ಭಾಗದಲ್ಲಿ ನಡೆದ ಘಟನೆಯನ್ನು ಎಲ್ಲಾ ಗುತ್ತಿಗೆದಾರರಿಗೆ ಅನ್ವಯಿಸುವುದು ತಪ್ಪು. ಶೇ 40ರಷ್ಟು ಕಮಿಷನ್, 18ರಷ್ಟು ಜಿಎಸ್ಟಿ ನೀಡಿ ಯಾವುದೇ ಕಾಮಗಾರಿಗಳನ್ನೂ ಮಾಡಲು ಸಾಧ್ಯವಿಲ್ಲ. ನಾವು ಯಾರಿಗೂ ಶೇ 40ರಷ್ಟು ಕಮಿಷನ್ ನೀಡಿ ಕೆಲಸ ಮಾಡಿಲ್ಲ’ ಎಂದರು.
‘ಗುತ್ತಿಗೆದಾರರ ಕ್ಷೇಮನಿಧಿ ಕಮಿಟಿಯಲ್ಲಿ ದಕ್ಷಿಣ ಕರ್ನಾಟಕದ ಪ್ರತಿನಿಧಿಗಳಿದ್ದು, ಉತ್ತರ ಕರ್ನಾಟಕದ ಪದಾಧಿಕಾರಿಗಳನ್ನು ಸದಸ್ಯರನ್ನಾಗಿ
ಮಾಡಬೇಕು. ಸರ್ಕಾರಿ ಗುತ್ತಿಗೆದಾರರಿಗೆ ಎಂಡಿಪಿ ಕಾಯ್ದೆಯಿಂದ ವಿನಾಯಿತಿ ನೀಡಬೇಕು. ಬಾಕಿ ಇರುವ ಬಿಲ್ಲುಗಳನ್ನು ಕೂಡಲೇ ಪಾವತಿಸಬೇಕು. ಜಿಎಸ್ಟಿಯನ್ನು ಶೇ 12ರಿಂದ 18ಕ್ಕೆ ಹೆಚ್ಚಿಸಿರುವುದು ಹೊರೆಯಾಗಿ ಪರಿಣಮಿಸಿದೆ’ ಎಂದರು.
‘ಸರ್ಕಾರಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಟೆಂಡರ್ ನೀಡುವ ಪದ್ದತಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಎನ್ಓಸಿಯನ್ನು ₹5 ಕೋಟಿ ಮೇಲ್ಪಟ್ಟ ಕಾಮಗಾರಿಗಳಿಗೆ ಮಾತ್ರ ಅನ್ವಯಿಸಬೇಕು. 200ಕ್ಕೂ ಹೆಚ್ಚು ಅನಧಿಕೃತ ಗುತ್ತಿಗೆದಾರರ ಪರವಾನಗಿಗಳನ್ನು ತನಿಖೆ ನಡೆಸಿ ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ, ರಾಮನಾಥ ಶಾನಭಾಗ್, ಕೆ.ಡಬ್ಲ್ಯೂ. ಕಂಕಾಳೆ, ರಮೇಶ ದುಬಾಶಿಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.