ಬೆಂಗಳೂರು: ‘ತಿಂಗಳಲ್ಲಿ ಎರಡು ದಿನ ಹಾಡಿಗಳಲ್ಲಿ, ಹಳ್ಳಿಗಳಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ನೆಲೆಸಿರುವ ಪ್ರದೇಶಗಳಲ್ಲಿ, ಪಂಚಾಯಿತಿಗಳಲ್ಲಿ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ‘ಇಲಾಖೆ ನಡೆ ಹಳ್ಳಿ ಕಡೆ’ ಅಭಿಯಾನ ಆರಂಭಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕ್ಯಾಲೆಂಡರ್ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಆಡಳಿತವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಒಯ್ಯುವುದು ಈ ಯೋಜನೆಯ ಉದ್ದೇಶ’ ಎಂದೂ ಅವರು ತಿಳಿಸಿದರು.
‘ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡದ ನಿರ್ದೇಶನಾಲಯದ ಮುಖ್ಯಸ್ಥರು ಇನ್ನು ಮುಂದೆ ಹಳ್ಳಿಗಳಲ್ಲಿ ಕೆಲಸ ಮಾಡಬೇಕು. ಹಂತ ಹಂತವಾಗಿ ಎಲ್ಲ ಇಲಾಖೆಗಳ ಮುಖ್ಯಸ್ಥರೂ ಹಳ್ಳಿಗಳಿಗೆ ತೆರಳಿ ಕೆಲಸ ಮಾಡುವಂತೆ ಸೂಚಿಸಲಾಗುವುದು. ನಾನು ಕೂಡಾ ಇನ್ನು ಹಳ್ಳಿಗಳಿಂದಲೇ ಆಡಳಿತ ನಡೆಸುತ್ತೇನೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.