ADVERTISEMENT

ವೈಚಾರಿಕತೆಯಿಂದ ಪ್ರಗತಿ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 0:22 IST
Last Updated 15 ಅಕ್ಟೋಬರ್ 2025, 0:22 IST
ನೃಪತುಂಗ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಡಾ. ಎಂ.ಸಿ. ಸುಧಾಕರ್, ನೃಪತುಂಗ ವಿ.ವಿ ಕುಲಪತಿ ಪ್ರೊ. ಫಜೀಹಾ ಸುಲ್ತಾನ, ಕುಲಸಚಿವೆ ಪ್ರೊ.ಎ.ಸಿ. ಮಂಜುಳಾ, ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೋಯಲ್‌ ಚೌಧರಿ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ.
ನೃಪತುಂಗ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಡಾ. ಎಂ.ಸಿ. ಸುಧಾಕರ್, ನೃಪತುಂಗ ವಿ.ವಿ ಕುಲಪತಿ ಪ್ರೊ. ಫಜೀಹಾ ಸುಲ್ತಾನ, ಕುಲಸಚಿವೆ ಪ್ರೊ.ಎ.ಸಿ. ಮಂಜುಳಾ, ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೋಯಲ್‌ ಚೌಧರಿ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ.   

ಬೆಂಗಳೂರು: ವಿಜ್ಞಾನ ವಿಷಯ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿಜ್ಞಾನ ಓದಿದವರೇ ಮೂಢನಂಬಿಕೆ, ಕಂದಾಚಾರಕ್ಕೆ ಗಂಟು ಬೀಳುತ್ತಿದ್ದಾರೆ. ಚಲನೆ ಇಲ್ಲದ ಜಾತಿ ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಪಟ್ಟಭದ್ರರು ಮೌಢ್ಯವನ್ನು ಬಿತ್ತುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನೃಪತುಂಗ ವಿಶ್ವವಿದ್ಯಾಲಯದಲ್ಲಿ ₹52 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಏಳು ಅಂತಸ್ತಿನ ನೂತನ ಶೈಕ್ಷಣಿಕ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶತಮಾನಗಳ ಹಿಂದೆಯೇ ಬಸವಾದಿ ಶರಣರು ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಟ ಮಾಡಿದ್ದರು. ಆದರೆ, ಇಂದಿಗೂ ಮೌಢ್ಯವಿದೆ. ವಿದ್ಯೆ, ಪ್ರತಿಭೆ ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಅವಕಾಶ ಸಿಗಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ಸಮಾಜದ ಪ್ರಗತಿ ಸಾಧ್ಯ. ವಿಜ್ಞಾನದ ವಿದ್ಯಾರ್ಥಿಗಳು ವೈಚಾರಿಕತೆ ಅಳವಡಿಸಿಕೊಂಡು ಸಮಾಜವನ್ನು ಮುನ್ನಡೆಸಬೇಕು ಎಂದರು.

ಸಂಪುಟದ ಕೆಲ ಸಹೋದ್ಯೋಗಿಗಳೂ ಸೇರಿದಂತೆ ಬಹಳಷ್ಟು ಜನರು ವಿಜ್ಞಾನ ಓದಿಯೂ ಹಣೆಬರಹ ಮತ್ತು ಕರ್ಮ ಸಿದ್ದಾಂತ, ಗ್ರಹಚಾರಗಳನ್ನೆಲ್ಲಾ ನಂಬುತ್ತಾರೆ. ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ‘ಮೌಢ್ಯ ನಿಷೇಧ ಕಾಯ್ದೆ’ ಜಾರಿಗೆ ತರಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಪಟ್ಟಭದ್ರರು ಆಳವಾಗಿ ಬೇರು ಬಿಟ್ಟಿದ್ದಾರೆ ಎಂದು ದೂರಿದರು.

ADVERTISEMENT

ಹೊಸ ಕಟ್ಟಡದ ಆರನೇ ಮತ್ತು ಏಳನೇ ಮಹಡಿಗಳನ್ನು ಪೂರ್ಣಗೊಳಿಸಲು ₹8 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. 

ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಫಜೀಹಾ ಸುಲ್ತಾನ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಖುಷ್ಬೂ ಗೋಯಲ್‌ ಚೌಧರಿ, ಆಡಳಿತ ಮತ್ತು ಮೌಲ್ಯಮಾಪನ ಕುಲಸಚಿವೆ ಪ್ರೊ.ಎ.ಸಿ.ಮಂಜುಳಾ ಉಪಸ್ಥಿತರಿದ್ದರು.

ವಿದೇಶಿ ವಿ.ವಿಗಳಲ್ಲೂ ಮೀಸಲಾತಿ: ಎಂ.ಸಿ.ಸುಧಾಕರ್

ಕರ್ನಾಟಕದಲ್ಲಿ ಆರಂಭವಾಗುವ ವಿದೇಶಿ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಸಲಹೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು. ಬ್ರಿಟನ್‌ನ ಲ್ಯಾಂಕಾಸ್ಟರ್‌ ವಿಶ್ವವಿದ್ಯಾಲಯ 2026ರ ಫೆಬ್ರವರಿಯಿಂದ ಕಾರ್ಯಾರಂಭ ಮಾಡಲಿದ್ದು ಆಗಸ್ಟ್‌ನಿಂದ ಆರಂಭವಾಗುವ ಪ್ರವೇಶ ಪ್ರಕ್ರಿಯೆ ವೇಳೆ ಮೀಸಲಾತಿ ಪರಿಗಣಿಸಲಾಗುವುದು. ಮೀಸಲಾತಿ ಅಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇಂಪೀರಿಯಲ್‌ ಕಾಲೇಜು ಸಹ  ಒಪ್ಪಂದ ಮಾಡಿಕೊಂಡಿವೆ. ಕರ್ನಾಟಕದ ಬಹಳಷ್ಟು ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿ ಉನ್ನತ ಶಿಕ್ಷಣ ಪಡೆಯಲು ಬಯಸಿದರೂ ಆರ್ಥಿಕ ಸಮಸ್ಯೆಯಿಂದ ಸಾಧ್ಯವಿಲ್ಲ. ರಾಜ್ಯದಲ್ಲೇ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಆರಂಭದಿಂದ ಅವರ ಕನಸು ನನಸಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.