ADVERTISEMENT

ರಾಜ್ಯದ ನಾಲ್ವರು ಸಾಧಕರಿಗೆ ಎನ್‌ಎಸ್‌ಎಸ್‌ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 18:16 IST
Last Updated 17 ಸೆಪ್ಟೆಂಬರ್ 2021, 18:16 IST
   

ಬೆಂಗಳೂರು: ರಾಜ್ಯದ ನಾಲ್ವರು ಸಾಧಕರು 2019–20ನೇ ಸಾಲಿನ ರಾಷ್ಟ್ರೀಯ ಎನ್‌ಎಸ್‌ಎಸ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆ ಮೂಲಕ (ಎನ್‌ಎಸ್‌ಎಸ್‌) ಸಾಮಾಜಿಕ, ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿಗೆ ಶ್ರಮಿಸುವ ಸ್ವಯಂ ಸೇವಕರು ಹಾಗೂ ಸೇವಕಿಯರಿಗೆ ಕೇಂದ್ರ ಸರ್ಕಾರವು ಈ ಪುರಸ್ಕಾರ ನೀಡುತ್ತದೆ.

ರಾಜೀವ್‌ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ಬಿ.ವಸಂತ ಶೆಟ್ಟಿ ಅವರಿಗೆ ವಿಶ್ವವಿದ್ಯಾಲಯ ಮಟ್ಟದ ‘ಅತ್ಯುತ್ತಮ ಸಂಯೋಜನಾಧಿಕಾರಿ’ ಗೌರವ ಲಭಿಸಿದೆ. ಧಾರವಾಡದ ಜೆಎಸ್‌ಎಸ್‌ ಬನಶಂಕರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸುರೇಶಪ್ಪ ಕೆ.ಸಜ್ಜನ ಅವರು ಕಾಲೇಜು ಮಟ್ಟದ ‘ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ’ ಪುರಸ್ಕಾರ ಪಡೆದಿದ್ದಾರೆ.

ADVERTISEMENT

ಬೆಂಗಳೂರಿನ ಕೆ.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿರೀಶ್‌ ಗೋವರ್ಧನ್‌ ಅವರಿಗೆ ‘ಅತ್ಯುತ್ತಮ ಸ್ವಯಂ ಸೇವಕ’ ಹಾಗೂ ದಕ್ಷಿಣ ಕನ್ನಡದ ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಬಿಂದಿಯಾ ಶೆಟ್ಟಿಯವರಿಗೆ ‘ಅತ್ಯುತ್ತಮ ಸ್ವಯಂ ಸೇವಕಿ’ ಪ್ರಶಸ್ತಿಗಳು ಒಲಿದಿವೆ.

ಇದೇ 24ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.