ADVERTISEMENT

ಡ್ರೋನ್‌ ದಾಳಿಗೆ ‘ಸಿಂಧೂರ’ದ ಆಘಾತ

ಪಾಕಿಸ್ತಾನದ ನಾಲ್ಕು ವಾಯು ರಕ್ಷಣಾ ಕೇಂದ್ರಗಳ ಮೇಲೆ ದಾಳಿ – ಅಲ್ಲಿನ ಸೇನೆಗೆ ಭಾರಿ ಹಾನಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 21:55 IST
Last Updated 9 ಮೇ 2025, 21:55 IST
   

ನವದೆಹಲಿ: ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಪ್ರದೇಶಗಳ ಉಗ್ರರ ದಮನಕ್ಕೆ ಭಾರತ ಸರ್ಕಾರವು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ಪಾಕಿಸ್ತಾನ ಸೇನೆಯು ಗುರುವಾರ ರಾತ್ರಿ ನಡೆಸಿದ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ದೇಶದೊಳಗೆ ನುಗ್ಗಿ ಪಾತಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಏಳು ಉಗ್ರರನ್ನು ಗಡಿ ಭದ್ರತಾ ಪಡೆ ಹತ್ಯೆಗೈದಿದೆ. 

ಪ್ರತಿಕಾರದ ಕ್ರಮವಾಗಿ ಭಾರತೀಯ ಸೇನೆಯು ಪಾಕ್‌ನ ವಾಯು ರಕ್ಷಣಾ ಕೇಂದ್ರಗಳ ಮೇಲೆ ಡ್ರೋನ್ ದಾಳಿ ನಡೆಸಿ ಕೇಂದ್ರವೊಂದನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನವು ಹೆಚ್ಚು ಸಾಮರ್ಥ್ಯದ ಆರ್ಟಿಲರಿ  ಗನ್‌ಗಳು ಮತ್ತು ಸಶಸ್ತ್ರ ಡ್ರೋನ್‌ಗಳನ್ನು ಬಳಸಿಕೊಂಡು ನಿಯಂತ್ರಣ ರೇಖೆಯಾದ್ಯಂತ ಶೆಲ್ ದಾಳಿ ನಡೆಸಿದೆ. ಇದರಿಂದಾಗಿ, ಭಾರತೀಯ ಸೇನೆಯ ಕೆಲವು ಸಿಬ್ಬಂದಿ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ. ಭಾರತದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ಸೇನೆಗೆ ಭಾರಿ ಹಾನಿ ಉಂಟಾಗಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾಕಿಸ್ತಾನ ಸೇನೆಯು ಶುಕ್ರವಾರ ರಾತ್ರಿಯೂ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆ, ಪಂಜಾಬ್‌ನ ಫಿರೋಜ್‌ಪುರ, ರಾಜಸ್ಥಾನದ ಪೋಖ್ರಾನ್‌ ಮತ್ತಿತರ ಕಡೆಗಳಲ್ಲಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಬ್ಲ್ಯಾಕ್ಔಟ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.  

ADVERTISEMENT

‘ಪಾಕಿಸ್ತಾನ ಸೇನೆಯು ಲೇಹ್‌ನಿಂದ ಸರ್‌ ಕ್ರೀಕ್‌ವರೆಗಿನ ಪಶ್ಚಿಮ ಗಡಿಯುದ್ದಕ್ಕೂ ಭಾರತೀಯ ಪಡೆಗಳ ಮೇಲೆ ಬುಧವಾರ ಹಾಗೂ ಗುರುವಾರ ರಾತ್ರಿ ಹಲವು ಬಾರಿ ದಾಳಿ ನಡೆಸಿದೆ. 36 ಪ್ರದೇಶಗಳ ಮೇಲೆ ದಾಳಿ ಮಾಡಲು ಸುಮಾರು 300-400 ಡ್ರೋನ್‌ಗಳನ್ನು ಸಹ ಬಳಸಿದೆ. ಅವುಗಳನ್ನು ಭಾರತೀಯ ಪಡೆಗಳು ಚಲನಶೀಲ ಮತ್ತು ಸ್ಥಿರ ಶಸ್ತ್ರಾಸ್ತ್ರಗಳ ಮೂಲಕ ಹೊಡೆದು ಉರುಳಿಸಿವೆ. ಡ್ರೋನ್‌ಗಳ ಮೂಲದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇವು ಟರ್ಕಿಯ ಡ್ರೋನ್‌ಗಳು ಎಂಬುದು ಆರಂಭಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದರು. 

ನಾಗರಿಕ ವಿಮಾನಗಳೇ ಗುರಾಣಿ: 

‘ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲ ಪಾಕ್ ಸೇನೆಯು ತನ್ನ ನಾಗರಿಕ ವಿಮಾನಗಳನ್ನೇ ಗುರಾಣಿಗಳನ್ನಾಗಿ ಬಳಸುತ್ತಿದೆ. ಈಗಿನ ಸನ್ನಿವೇಶದಲ್ಲಿ ಭಾರತ ಹಾಗೂ ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯ ಪ್ರದೇಶದಲ್ಲಿ ಅಂತರರಾಷ್ಟ್ರೀಯ ವಿಮಾನ ಸೇರಿದಂತೆ ಯಾವುದೇ ವಿಮಾನ ಹಾರಾಟ ಸುರಕ್ಷಿತವಲ್ಲ. ಭಾರತವು ಈ ಭಾಗದಲ್ಲಿ ತನ್ನ ವಿಮಾನಗಳ ಹಾರಾಟ ನಿಲ್ಲಿಸಿದೆ. ಆದರೆ, ಪಾಕಿಸ್ತಾನದ ಕರಾಚಿ ಹಾಗೂ ಲಾಹೋರ್‌ ನಡುವೆ ವಿಮಾನಗಳು ಹಾರಾಟ ನಡೆಸಿವೆ. ಭಾರತೀಯ ವಾಯುಪಡೆಯು ಭಾರಿ ಸಂಯಮ ಪ್ರದರ್ಶಿಸಿ ತನ್ನ ಪ್ರತಿಕ್ರಿಯೆ ನೀಡಿದೆ’ ಎಂದು ಅವರು ತಿಳಿಸಿದರು. 

ಗಡಿ ಜಿಲ್ಲೆಗಳಲ್ಲಿ ಆತಂಕ: 

ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಹಾಗೂ ರಾಜೌರಿ ಜಿಲ್ಲೆಗಳ ಕೆಲವು ಪ್ರದೇಶಗಳ ಮೇಲೆ ಪಾಕಿಸ್ತಾನ ಶುಕ್ರವಾರ ಮುಂಜಾನೆ ನಡೆಸಿದ ಗುಂಡಿನ ಹಾಗೂ ಶೆಲ್‌ ದಾಳಿಯಿಂದಾಗಿ ಗ್ರಾಮಸ್ಥರೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅದರ ಬೆನ್ನಲ್ಲೇ, ಭಾರತೀಯ ಸೇನಾ ಪಡೆ ಪ್ರತಿದಾಳಿ ನಡೆಸಿದೆ. ಬೆಳಿಗ್ಗೆ 3.50ರಿಂದ 4.45ರ ನಡುವೆ ತೀವ್ರ ಸ್ಫೋಟ ಸಂಭವಿಸಿದೆ. ಪಾಕ್ ಸೇನೆ ಹಾರಿಸಿದ ಡ್ರೋನ್‌ ಹಾಗೂ ಕ್ಷಿಪಣಿಗಳನ್ನು ಸೇನಾ ಪಡೆ ಹಿಮ್ಮೆಟಿಸಿದೆ. ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ರಾತ್ರಿ ವಿದ್ಯುತ್‌ ಕಡಿತ ಮಾಡಲಾಗಿತ್ತು. ಶ್ರೀನಗರ ಮತ್ತು ಜಮ್ಮು ವಿಮಾನ ನಿಲ್ದಾಣಗಳನ್ನು ಸತತ ಮೂರನೇ ದಿನವೂ ಮುಚ್ಚಲಾಯಿತು. ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಯಿತು.  

ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರು ಅಂತರರಾಷ್ಟ್ರೀಯ ಗಡಿಯ ಮೂಲಕ ಒಳನುಗ್ಗಲು ಪ್ರಯತ್ನಿಸಿದರು. ಗಡಿ ಭದ್ರತಾ ಪಡೆಯು ಕಾರ್ಯಾಚರಣೆ ನಡೆಸಿ ಏಳು ಉಗ್ರರನ್ನು ಕೊಂದು ಹಾಕಿತು ಹಾಗೂ ಪಾಕಿಸ್ತಾನದ ರೇಂಜರ್ಸ್ ಪೋಸ್ಟ್ ಅನ್ನು ಧ್ವಂಸಗೊಳಿಸಿತು. ಭಯೋತ್ಪಾದಕರ ದೊಡ್ಡ ಗುಂಪೊಂದು ಸಾಂಬಾ ಜಿಲ್ಲೆಯ ಮೂಲಕ ನುಗ್ಗಲು ಪ್ರಯತ್ನಿಸುತ್ತಿರುವ ಬಗ್ಗೆ ಪಡೆಗೆ ಮಾಹಿತಿ ಲಭಿಸಿತು. ಬಿಎಸ್‌ಎಫ್‌ ಗುರುವಾರ ರಾತ್ರಿ ಏಳು ಗಂಟೆಗೆ ಕಾರ್ಯಾಚರಣೆ ನಡೆಸಿ ಏಳು ಮಂದಿಯನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾಜಸ್ಥಾನದ ಜೈಸಲ್ಮೇರ್‌, ಪಂಜಾಬ್‌ನ ಬಠಿಂಡಾ, ಹೊಷಿಯಾರ್‌ಪುರ ಮತ್ತಿತರ ಕಡೆಗಳಲ್ಲಿ ಕ್ಷಿಪಣಿಯ ಅವಶೇಷಗಳು ಪತ್ತೆಯಾಗಿವೆ. ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕ್‌ ಕ್ಷಿಪಣಿ ದಾಳಿ ನಡೆಸಿದೆ. ಈ ಎಲ್ಲ ಕುಕೃತ್ಯಗಳನ್ನು ವಿಫಲಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಹಾಗೂ ಗುಜರಾತ್‌ನ ಗಡಿ ಜಿಲ್ಲೆಗಳಲ್ಲಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಮನೆಯಿಂದ ಹೊರಕ್ಕೆ ಬಾರದಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಸೈರನ್‌ಗಳನ್ನು ಮೊಳಗಿಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದರು. 

ಸಚಿವರ ಸರಣಿ ಸಭೆ: 

ಭಾರತ ಹಾಗೂ ಪಾಕ್‌ ನಡುವಿನ ಸಂಬಂಧ ಮತ್ತಷ್ಟು ವಿಷಮಿಸಿದ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ಪಡೆಗಳ ಮುಖ್ಯಸ್ಥರ ಜತೆಗೆ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗಡಿಯಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸಭೆ ನಡೆಸಿ ದೇಶದಾದ್ಯಂತ ಆರೋಗ್ಯ ಮೂಲಸೌಕರ್ಯದ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ ಗಡಿ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.