ADVERTISEMENT

ಎನ್‌ಪಿಆರ್‌ ‘ಅನಾಥ ಶಿಶು’: ಪ್ರೊ.ರವಿವರ್ಮಕುಮಾರ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 16:30 IST
Last Updated 2 ಫೆಬ್ರುವರಿ 2020, 16:30 IST

ಮೈಸೂರು: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹುಟ್ಟಿದಾಗ ಅದಕ್ಕೆ ತಂದೆ ಇರಲಿಲ್ಲ. ಅದು ‘ಅನಾಥ ಶಿಶು’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವ್ಯಂಗ್ಯವಾಡಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ 'ಅಸಾಂವಿಧಾನಿಕ ಹಾಗೂ ತಾರತಮ್ಯದ ಎನ್‌ಪಿಆರ್‌– ಎನ್‌ಆರ್‌ಸಿ– ಸಿಎಎ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಭಾರತದ ಸಂವಿಧಾನದಲ್ಲಿ ಎನ್‌ಪಿಆರ್‌ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಅದಕ್ಕೆ ಕಾನೂನಿನ ರಕ್ಷಣೆಯೂ ಇಲ್ಲ’ ಎಂದರು.

‘ಸಂವಿಧಾನದ ಒಂದೊಂದೇ ಅಂಗಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ನಾವು ಆಯ್ಕೆ ಮಾಡಿ ಕಳುಹಿಸಿದ ಮಂದಿ ಈ ದೇಶವನ್ನು ಆಳುತ್ತಿಲ್ಲ. ಆರ್‌ಎಸ್‌ಎಸ್‌
ನವರು ಆಳುತ್ತಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಆರ್‌ಎಸ್‌ಎಸ್‌ ಎಂಬುದು ಬ್ರಾಹ್ಮಣರ ಅಗ್ರಹಾರ. ಅಲ್ಲಿ ಬೇರೆಯವರಿಗೆ ಪ್ರವೇಶವಿಲ್ಲ. ಮುಸ್ಲಿಮರನ್ನು ಬದಿಗಿಡಿ, ಹಿಂದೂಗಳಲ್ಲೇ ಎಷ್ಟೋ ಜಾತಿಯವರನ್ನು ಹತ್ತಿರ ಸೇರಿಸಿಕೊಳ್ಳಲ್ಲ. ಮಹಿಳೆಯರಿಗೂ ಪ್ರವೇಶವಿಲ್ಲ’ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ದುರುದ್ದೇಶ ಇಟ್ಟುಕೊಂಡು ಬಿಜೆಪಿಯವರು ಸಿಎಎ, ಎನ್ಆರ್‌ಸಿ ಜಾರಿಗೆ ತರಲು ಮುಂದಾಗಿದ್ದಾರೆ. ಅವು
ಗಳನ್ನು ಯಾವ ಕಾಲಕ್ಕೂ ಜಾರಿಗೊಳಿಸಲು ಸಾಧ್ಯವಿಲ್ಲ’ ಎಂದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ‘ಜನರಿಗೆ ಸುಳ್ಳು ಹೇಳುತ್ತಾ ಹೆಚ್ಚುದಿನ ಆಡಳಿತ ನಡೆಸಲು ಬಿಜೆಪಿಗೆ ಸಾಧ್ಯವಿಲ್ಲ. ನನ್ನ ಬಳಿ ಜನನ ಪ್ರಮಾಣಪತ್ರ ಇಲ್ಲ. ದಾಖಲೆಗಳನ್ನು ಕೊಡಿ ಎಂದರೆ ಎಲ್ಲಿಂದ ಕೊಡಲಿ’ ಎಂದು ಪ್ರಶ್ನಿಸಿದರು.

‘ಮನೆಯಲ್ಲಿ ಕುಳಿತುಕೊಳ್ಳುವವ ನಾನಲ್ಲ’

‘ಕಳೆದ ತಿಂಗಳು ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದೆ. ಆ ದಿನ ಸುದ್ದಿ ವಾಹಿನಿಯೊಂದರ ನಿರೂಪಕರು ‘ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರು ಅಲ್ಲಿ ಮಾತನಾಡಿದ್ದು ಸರಿಯಲ್ಲ’ ಎಂದಿದ್ದರು. ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಜನರಿಗೆ ಸಂಕಷ್ಟ ಬಂದಾಗ ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ’ ಎಂದು ಗೋಪಾಲ
ಗೌಡ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.